Wednesday, June 1, 2011 2 comments

ದ್ವಂದ್ವ ?


ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06 . 
ಯಾಕೋ ಎಚ್ಚರವಾಯ್ತು. ಯಾವತ್ತೂ 6 .30 ಕ್ಕಿಂತ ಮುಂಚೆ ಎಚ್ಚರವಾಗಿದ್ದಿಲ್ಲ. ಕಿಬ್ಬೊಟ್ಟೆಯ ಆಳದಲ್ಲೆಲ್ಲೋ ನೋವಿರುವಂತೆನಿಸಿತು. ಬೆಳಿಗ್ಗೆ ಒಂದು ರೌಂಡ್  ವಾಕ್ ಹೋದರೆ ಸ್ವಲ್ಪ ನೆಮ್ಮದಿಯೇನ್ನಿಸಬಹುದೇನೋ ಎಂತೆನಿಸಿತು. ಹಳೆಯ  ದೊಗಲೆ ಟಿ- ಶರ್ಟ್ ಮತ್ತು  ಪೈಜಾಮ ಧರಿಸಿದವನೇ, ದೊಡ್ಡ ಬಿಲ್ಡಿಂಗಿನ ಬೇಸ್ ಮೆಂಟಿನಲ್ಲಿರುವ ನನ್ನ ಚಿಕ್ಕ ರೂಂನಿಂದ ಹೊರಬಿದ್ದೆ. 

ಗುರುವಾರ . ಎಪ್ರಿಲ್  5 2007 . ಸಮಯ ಬೆಳಿಗ್ಗೆ 11 .30 .
ದರಿದ್ರನಾರಾಯಣನ ಹಾಗೆ ಮಂಚದ ಮೇಲೆ ಬಿದ್ದವನ ಕೈಯಲ್ಲಿ ಹಳೆಯ ದಿನಪತ್ರಿಕೆಯ ಪುರವಣಿಯೊಂದಿತ್ತು. ಕಿವಿಯಲ್ಲಿ ಅಮ್ಮನ ಸುಪ್ರಭಾತದ ನಿನಾದವಿತ್ತು. ನಾನು ಡಿಗ್ರಿ ಮುಗಿದ ಮೇಲೆಯೂ ಕೆಲಸ ಸಿಗದಿದ್ದಕ್ಕೆ ಅಮ್ಮನಿಗೊಂದು ನೋವಿತ್ತು. ಈಗಾದರೂ ಬಡತನದ ಕುಟುಂಬಕ್ಕೆ ನಾನು ಸಹಾಯವಗುತ್ತೆನೆಂದು ಎನಿಸಿದ್ದ ಅಮ್ಮನಿಗೆ , ನನ್ನ ಪ್ರಾಮಾಣಿಕತೆ ಅಸಮಾಧ್ಹಾನ ತಂದಿತ್ತು. ಪೋಸ್ಟ್ ಮ್ಯಾನ್ ರಂಗಪ್ಪ ಎಸೆದ ಪತ್ರವನ್ನು ಅಮ್ಮ ಕೆಮ್ಮುತ್ತಲೇ ನನ್ನ ಕೈಯಲ್ಲಿ ತಂದು ತುರುಕಿದಳು. ಕಾಗದ ತುಮಕೂರಿನ ಖಾಸಗಿ ಕಾಲೇಜಿನಿಂದ ಬಂದಿದ್ದರಿಂದ ಸ್ವಲ್ಪ ಕುತುಉಹಲದಿಂದ ಹರಿದು ಓದಿದೆ. ಕಾಗದ ಓದಿ ಮುಗಿಸುವ ಹೊತ್ತಿಗೆ ನನ್ನ ಮುಖದಲ್ಲಿ ಮುಗುಳ್ನಗೆಯೊಂದು ಮೂಡಿತ್ತು . ಅಮ್ಮನ ಹುಬ್ಬುಗಳು ಕುತೂಹಲದಿಂದ ಗಂಟಾಗಿದ್ದವು. ಕೊನೆಗೂ ನಾನು ಕನ್ನಡದ ಅಧ್ಯಾಪಕನಾಗಿದ್ದೆ. ಅಮ್ಮನಿಗೆ ಇದರಿಂದ ಖುಷಿಯಾಗಿದ್ದರೂ , ಸಂಬಳ ಮತ್ತು ಸ್ವಲ್ಪ ದುಉರದ ಸ್ಥಳವಾದ್ದರಿಂದ ಬೇಸರವಾಗಿತ್ತು

ಶುಕ್ರವಾರ . ಅಕ್ಟೋಬರ್ 2 2009  ಸಮಯ ಬೆಳಿಗ್ಗೆ 9 
ಗಾಂಧಿ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲೊಂದು ಪುಟ್ಟ ಕಾರ್ಯಕ್ರಮ. ಡಿಗ್ರಿ ಮೊದಲ್ನೇ ವರ್ಷದ ಹುಡುಗನೊಬ್ಬ ತನ್ನ ಭಾಷಣದಲ್ಲಿ ನನ್ನನ್ನು ಗಾಂಧಿಗೆ ಹೋಲಿಸಲು ಪ್ರಯತ್ನಿಸಿದ್ದ. ಕಾಲೇಜಿನಲ್ಲಿ ನಾನೊಬ್ಬ ಸಭ್ಯ, ಸಜ್ಜನ, ಮತ್ತು ಪ್ರಾಮಾಣಿಕ ಅಧ್ಯಾಪಕನಾಗಿದ್ದೆ.ನಾನು ಮತ್ತೊಬ್ಬ ಗಂಧಿಯೇನೋ ಅಂದೆನಿಸಿ ಉಬ್ಬಿಹೊಗಿದ್ದೆ.

ಮಂಗಳವಾರ . ಮೇ 1, 2001. ಮಧ್ಯಾಹ್ನ 12.45 
ಕಾರ್ಮಿಕ ದಿನಾಚರಣೆಯ ಅಂಗವಾಗಿ ಊರಿನ ಕ್ರೀಡಾಂಗಣದಲ್ಲಿ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ಕಾರ್ಮಿಕ ಸಚಿವ ವೀರೇಶ್ ಗುರಾಣಿ ಯವರು ಕಾರ್ಯಕ್ರಮದ ಅತಿಥಿಯಾಗಿದ್ದರು. ಕಾರ್ಯಕ್ರಮದ ನೂಕುನುಗ್ಗಲಿನ ನಡುವೆ ಅಪ್ಪನಿಗೆ ಹೃದಯಾಘಾತವಾಗಿತ್ತು. ಅಪ್ಪ ಕಾರ್ಮಿಕರ ದಿನದಂದು ಶವವಾಗಿದ್ದ. ಅಪ್ಪನ ಅಕಾಲ ಮರಣದಿಂದ ನಾನು ಸೈನ್ಸ್ ಬಿಟ್ಟು ಆರ್ಟ್ಸ್ ಓದುವಂತಾಯಿತು. 

ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06.30.
ನಾನು ಈ ಎಲ್ಲ ಗುಂಗಿನಿಂದ ಹೊರಬಂದು ನೋಡಿದಾಗ ನನ್ನ ರೂಮಿದ್ದ ಬಿಲ್ಡಿಂಗಿನ ಮುಂದಿದ್ದೆ. ಸೀದ ಬೇಸ್ ಮೆಂಟಿನಲ್ಲಿರುವ ನನ್ನ ರೂಮಿಗೆ ತೆರಳುವದನ್ನು ಬಿಟ್ಟು ನೆಲ ಅಂತಸ್ತಿನಲ್ಲಿರುವ ಚಿಕ್ಕ ಕೋ-ಅಪರೇಟಿವ್ ಬ್ಯಾಂಕ್ನತ್ತ ದೃಷ್ಟಿ ಹರಿಸಿದೆ. ಅಸಹಜವಾದ ಸಂಗತಿಯೊಂದನ್ನು ಗಮನಿಸಿದೆ. ಬ್ಯಾಂಕಿನ ಕೀಲಿ ಕೈ ಬಾಗಿಲಿನಲ್ಲೇ ನೇತಾಡುತ್ತಿತ್ತು. ಮೈ ಕೈ ಎಲ್ಲ ಬೆವರತೊಡಗಿದವು.ಅರ್ಧ ಗಂಟೆಯ ಹಿಂದೆ ನೆನಪಾದ ಹಳೆಯ ನೆನಪುಗಳು ಮತ್ತೆ ನೆನಪಾದವು. ಎಲ್ಲವು ಕಲಸು ಮೇಲೋಗರ. ಆದರ್ಶಗಳೆಲ್ಲ ಉಪ್ಪು ಸಾಗರ. ತಕ್ಷಣವೇ ಕಟ್ಟಡದ ಒಳ ನಡೆದೆ. ಹೃದಯ ಬಾಯಿಗೆ ಬಂದಂತಾಗಿತ್ತು. ಕಟ್ಟಡವೆಲ್ಲಾ ಖಾಲಿ. ಒಂದು ಖುರ್ಚಿಯೂ ಇಲ್ಲ. ನನ್ನ ಎದೆ ಬಡಿತ ನನಗೆಯೇ ಕೇಳಿಸುತ್ತಿತ್ತು. ಅಂಜಿಕೆಯಿಂದ ಕಟ್ಟಡ ಕಂಪೌಂಡಿನಿಂದ ಹೊರ ಓಡಿಬಂದೆ. ಕಾಲುಗಳು ಸಣ್ಣಗೆ ನಡುಗುತ್ತಿದ್ದವು.ಯಾರಾದರೂ ನನ್ನನ್ನು ಗಮನಿಸಿದರೆ ಎಂದು ಸುತ್ತಲು ಕಣ್ಣು ಹಾಯಿಸಿದೆ, ಮೊದಲನೇ ಮಹಡಿಯ ಕಿಟಕಿಯ ಪಕ್ಕದಲ್ಲಿದ್ದ ಬೋರ್ಡ್ ಒಂದು ಗಮನ ಸೆಳೆಯಿತು . ಅದರಲ್ಲಿದ್ದುದು  ಇದು - TO LET, Office/ Commercial Space Contact : 98x0198x01. ನನ್ನ ಆದರ್ಶದ ಮುಖವಾಡ ಕಳಚಿ ಬಿದ್ದಿತ್ತು. ನನ್ನಲ್ಲೊಬ್ಬ ಸತ್ತಿದ್ದ.   




Tuesday, May 31, 2011 0 comments

ಸೀರೆ

"ಛೆ ! ಈ  ದೀಪಾವಳಿಯೂ ಹೀಗೆ ಕಾಡಬೇಕಾ? ಇನ್ನೂ ನಾಲ್ಕು ದಿನ ತಡವಾಗಿ ಬಂದಿದ್ದರೆ ಏನಾಗ್ತಿತ್ತು? ಅಕ್ಟೋಬರ್ 27    ರಂದು ದೀಪಾವಳಿ.ಇವತ್ತಿಗೆ ಆರು ದಿನ ಇದೆ. ಸಂಬಳ ಬರೋದಕ್ಕೆ ಹತ್ತು ದಿನ ಬಾಕಿ. ಕೈಯಲ್ಲಿರೋದು 3500 ರೂ. ದಿನಕ್ಕೆ ನೂರು ರೂಪಾಯಿಯಂತೆ ಖರ್ಚಿಗಿಟ್ಟುಕೊಂಡರೂ 2500 ರೂ ಗಳವರೆಗೆ ಸೀರೆ ತಗೋಬಹುದು. ಆದರೆ ಆ ನಿರ್ಮಲ ದಸರೆಗೆ ಉಟ್ಟಂತಹ ಸೀರೆ ತಗೋಬಹುದಾ. ಇಷ್ಟಕ್ಕೂ ಅವಳ ಸೀರೆ ಬೆಲೆ ನಾನು ಕೇಳಲೇ ಇಲ್ಲ. ಇರಲಿ , ಧೈರ್ಯ ಮಾಡಿ ತಗೊಂಡೆ ಬಿಡೋಣ" ಅಂದುಕೊಂಡೆ. ನನಗೆ ನಿರ್ಮಲಳ ಸೀರೆಗಿಂತ ಅವಳ ಮೊನಚು ನೋಟ ನನ್ನನ್ನು ಕುಕ್ಕಿತ್ತು. ಕೈಯಲ್ಲಿರೋ ಗಡಿಯಾರ ಸಮಯ 5 :40   ನ್ನು ತೋರಿಸುತ್ತಿತ್ತು, ನಮ್ಮ ಬಾಸ್ ನ  ಹುಬ್ಬುಗಳ ಥರ . ನಾನು ಹೊಸ ಹುಮ್ಮಸ್ಸಿನೊಂದಿಗೆ ಚಿಕ್ಕಪೇಟೆ ಒಳ ಹೂಕ್ಕಿದ್ದೆ. ಎಲ್ಲ ಅಂಗಡಿಗಳೂ ಗೌಜು ಗದ್ದಲಗಳಿಂದ ತುಂಬಿದ್ದವು.ಎಲ್ಲೆಲ್ಲೂ ಖರೀದಿಯ ಸಂಭ್ರಮ. ನನಗೆ ಗೊತ್ತಿರುವಂತೆ , ಇದೇ ಮೊದಲ ಸಲ ನಾನು ಒಬ್ಬಳೇ ಸೀರೆ ತರಲು ಹೊರಟಿದ್ದು. ಕೊನೆಗೂ ನಿರ್ಮಲಳ ಸೀರೆಯಂತಹ ತರಹದ ಸೀರೆಯನ್ನುಟ್ಟ ಬೊಂಬೆಯೊಂದು  ನನ್ನ ಕಣ್ಣು ಕುಕ್ಕುವಲ್ಲಿ  ಯಶಸ್ವಿಯಾಗಿತ್ತು .ಚಕ್ಕನೆ ಅಂಗಡಿಯ ಒಳ ಹೊಕ್ಕೆ. ನಿರ್ಮಲದು ತಿಳು ನೀಲಿ ಸೀರೆ. ನಾನೂಅದೇ ಬಣ್ಣದ್ದು ತಗೊಂಡ್ರೆ ಚೆನ್ನಾಗಿರೊಲ್ಲ ಎನ್ನಿಸಿತು. ಅದಕ್ಕೆ, ಕೊನೆಗೂ ಕನಕಾಂಬರ ಬಣ್ಣದ ಸೀರೆ ಇಷ್ಟವಾಯ್ತು. ಸೀರೆಯ ಅಂಚಿನಲ್ಲಿರುವ ಹಂಸಗಳನ್ನು ನನಗಾಗಿಯೇ ಬಿಡಿಸಿದಂತಿತ್ತು, ಆಹ್! ಸೀರೆಯ ತುದಿಯಲ್ಲಿದ್ದ ಪ್ರೈಸ್ ಟ್ಯಾಗ್ ನನ್ನ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಬೆಲೆ 3000 ರೂ.ಚೌಕಾಶಿ ಮಾಡಲು ಪ್ರಯತ್ನಿಸಿದೆ. ಅಂಗಡಿಯವನು ಹೇಳಿದ್ದು ,'' ಸೀರೆ ಫಿಕ್ಸ್ ರೇಟ್. ಸೀರೆ ಜೊತೆಗೆ ಲಕ್ಕಿ ಕೂಪನ್ ಬರುತ್ತೆ. ದೀಪಾವಳಿ ದಿನ ಲಕ್ಕಿ ಡಿಪ್ ಇರುತ್ತೆ. ಅದರಲ್ಲಿ ನಿಮ್ಮ ನಂಬರ್ ಬಂದ್ರೆ ಸೀರೆಯ ಅರ್ಧ ಬೆಲೆ ವಾಪಸ್. ಆ ಥರ 100 ಜನರಿಗೆ ಬಹುಮಾನ ಗ್ಯಾರಂಟಿ.ಲಕ್ಕಿ ಡಿಪ್ ವಿಜೇತರನ್ನ ಮಾರನೇ ದಿನದ ಪ್ರಮುಖ ಪತ್ರಿಕೆಗಳಲ್ಲಿ ಘೋಷಿಸಲಾಗುತ್ತೆ".ಕೊನೇಗೂ ಧೈರ್ಯ ಮಾಡಿ ಪ್ಯಾಕ್ ಮಾಡಲು ಆದೇಶಿಸಿದೆ . ಇತ್ತ ಅಂಗಡಿಯ ಮಾಲೀಕನಿಗೆ ಹಣ ತೆತ್ತು ರಸೀದಿ ಮತ್ತು ಲಕ್ಕಿ ಕೂಪನ್ ಇಸಿದುಕೊಂಡೆ. ಕುತೂಹಲ ತಡೆಯಲಾರದೆ ಲಕ್ಕಿ ಕೂಪನ್ ನಂಬರ್ ನೋಡಿದೆ. R58325 .ಅರೆ , ಈ ನಂಬರ್ ಎಲ್ಲೂ ನೋಡಿದ ಹಾಗಿದೆಯಲ್ಲ ಅಂತನ್ನಿಸಿತು, ಚಕ್ಕನೆ ನೆನಪಾದದ್ದು ನನ್ನ ಡಿಗ್ರಿ ಪರೀಕ್ಷೆಯ ನಂಬರ್. ಅದು CO58352 . ನನ್ನ ಪರೀಕ್ಷೆಯ ಫಲಿತಾಂಶ ಗಳೆಲ್ಲ ಕಣ್ಣ ಮುಂದೆ ಹಾದುಹೋದಂತಾಯಿತು. ಯಾಕೋ ಸೀರೆ ಮತ್ತು ಲಕ್ಕಿ ಕೂಪನ್ ಎರಡೂ ಬೇಡವೆನಿಸತೊಡಗಿದವು.ಹಾಗೂ ಹೀಗೂ ಮನಸ್ಸ್ಸನ್ನು ಸಿದ್ಧಗೊಳಿಸತೊಡಗಿದೆ. ಸೀರೆ ಇಲ್ಲದೆ ದೀಪಾವಳಿ ಆಚರಿಸೋಕೆ ಆಗಲ್ವ ಎಂದೆನಿಸಿತು.ನಿರ್ಮಲಳ ಮೇಲಿನ  ಅಸೂಯೆಗೆ ನಾನ್ಯಾಕೆ ಸೀರೆ ತಗೋಬೇಕು ಎಂದೆನ್ನಿಸಿತು  ತಕ್ಷಣವೇ ಸೀರೆ ಖರೀದಿ ಕ್ಯಾನ್ಸಲ್ ಮಾಡಿಸಿದೆ. ಅಂಗಡಿ ಮಾಲೀಕ ನನ್ನ ಸಹಸ್ರನಾಮ ಶುರು ಮಾಡಿದ. ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ , ನಿರುಮ್ಮಳವಾಗಿ ಮನೆಯ ದಾರಿ ಹಿಡಿದೆ. 3000 ರೂ ನನ್ನ ಪರ್ಸ್ ನಲ್ಲಿ ಭದ್ರವಾಗಿತ್ತು. ಮನಸ್ಸಿನಲ್ಲೊಂದು ಸಮಾಧಾನ ಮೂಡಿತ್ತು. ಸೀರೆ ಮರೆತುಹೋಗಿತ್ತು. 
ಅಕ್ಟೋಬರ್ ೨೯ ರ ಪ್ರಜಾವಾಣಿಯಲ್ಲಿ ದೀಪಾವಳಿಯ ವಿಶೇಷ ಕಥೆಗಳ ಕೆಳಗೆ ಬಾಲಾಜಿ ಸೀರೆ ಅಂಗಡಿಯ ಲಕ್ಕಿ ಡ್ರಾ ನಂಬರ್  ಗಳ 10 ಸಾಲುಗಳಿದ್ದವು. ಅದರ 6 ನೇ ಸಾಲಿನ 8 ನೇ ನಂಬರ್  R58325 ಆಗಿತ್ತು.
 
;