Friday, January 4, 2013 0 comments

ಮೂಕಸಾಕ್ಷಿ

           ಅದೊಂದು ನೀರವ ರಾತ್ರಿ ಎಂದೆನಿಸಿತು ಗಣೇಶನಿಗೆ.ತನ್ನ ರೂಮಿನಲ್ಲಿ ಶತಪಥ ತಿರುಗುತ್ತಿದ್ದ. ಕಿಟಕಿಯಿಂದ ಬೃಹದಾಕಾರದ ಆಲದಮರದ ಬಿಳಲುಗಳು ವಿಚಿತ್ರವಾಗಿ ಕಾಣುತ್ತಿದ್ದವು. ಹಕ್ಕಿಗಳ ಕಲರವ ಇಂಪೆನಿಸಲಿಲ್ಲ. ಸಂಜೆ ಡಾಕ್ಟರ್ ಹೇಳಿದ ಮಾತುಗಳು ಕಿವಿಯಲ್ಲಿ ಆಡುತ್ತಿದ್ದವು. ತಲೆಯಲ್ಲಿ ವಿಚಾರಗಳ ದೊಂಬರಾಟ ನಡೆಯುತ್ತಿತ್ತು. ಮೃತ್ಯು ಹೊಸ್ತಿಲ ಬಳಿಯಲ್ಲೇ ಹೊಂಚು ಹಾಕಿ ಕಾದಂತಿತ್ತು. ತನಗೆ ರಕ್ತದ ಕ್ಯಾನರ್ ಇದೆ ಎಂದರೆ ತನಗೆ ನಂಬಲಾಗಲಿಲ್ಲ. ಹೆಚ್ಚೆಂದರೆ ಮೂರು ತಿಂಗಳು ಬದುಕಬಹುದು ಎಂದು ಡಾಕ್ಟರ್ ಹೇಳಿದ್ದರು. ಮತ್ತು ಕೆಲವು ಮಾತ್ರೆಗಳನ್ನು ಕೂಡ ಬರೆದು ಕೊಟ್ಟಿದ್ದರು. ಮೂರು ತಿಂಗಳ ಬದುಕಿಗೆ ಮಾತ್ರೆ ಅವಶ್ಯ ಎಂದೆನಿಸಲಿಲ್ಲವೆಂದು ಔಷಧಿ ಅಂಗಡಿವರೆಗೆ ಹೋಗಿ ಬರಿಗೈಲಿ ವಾಪಸ್ ಬಂದಿದ್ದ. ತನಗೆ ಆಗಿರುವ ವಯಸ್ಸೆಷ್ಟು ಎಂಬುದನ್ನು ಲೆಕ್ಕ ಹಾಕತೊಡಗಿದ. ಬರುವ ಗಣಪತಿ ಹಬ್ಬಕ್ಕೆ, ಮೂವತ್ತೈದು ಮುಗಿಯುತ್ತದೆ. ಮೂವತ್ತಾರನೇ ವಯಸ್ಸಿಗೆ ತಾನು ಸಾಯುತ್ತೇನೆ ಎಂದರೆ ಅವನಿಗೇ ನಂಬಲಾಗಲಿಲ್ಲ.
           'ಕಾಲು ತೊಳ್ಕೊಂಡು ಅವಲಕ್ಕಿ ತಿನ್ನೊ, ಅದೇನು ಯಾವಾಗಲೂ ರೂಮಲ್ಲೇ ಬಿದ್ದಿರ್ತೀಯಾ, ಅದೇನು ಒದ್ತೀಯೋ' ಅಮ್ಮನ ಗದರುವಿಕೆ ಸಾಯಂಕಾಲದ ನಿದ್ರೆಯನ್ನು ಹಾಳುಮಾಡಿತ್ತು. ಪಿ.ಯು.ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದ ಗಣೇಶ, ಕಾಲೇಜಿಗೆ ಹೋಗಿ ಬಂದ ನಂತರ ತನ್ನ ರೂಮ್ ಬಿಟ್ಟು ಕದಲುತ್ತಿರಲಿಲ್ಲ. ಅಣ್ಣ ರಮೇಶ ಮತ್ತು ತಮ್ಮ ಸತೀಶನೊಂದಿಗೆ ಕೂಡ ಮಾತು ಕಡಿಮೆ. ಅತ್ತಿಗೆ ಶಾಂಭವಿ ಕೂಡ ಅಷ್ಟಕ್ಕಷ್ಟೆ. ಅಪ್ಪನ ಸಾವಿನ ನಂತರ ಮನೆಯ ಜವಾಬ್ದಾರಿಯನ್ನೆಲ್ಲ ಅಣ್ಣ ರಮೇಶನೇ ಹೊತ್ತಿದ್ದ. ತಮ್ಮ ಸತೀಶನಂತೂ ಇವನ ಇರುವಿಕೆಯನ್ನು ಉಪೇಕ್ಷಿಸಿದ್ದ. ಅಮ್ಮನಿಗೆ ಭಾರತ, ಭಾಗವತಗಳೇ ಸಂಗಾತಿಯಾಗಿದ್ದವು. ಅಮ್ಮ ಮನೆಯ ಎದುರುಗಡೆಯ ಆಲದಮರದ ನೆರಳಿನಲ್ಲಿ ಕುಳಿತು ಭಾಗವತ ಓದುತ್ತಿದ್ದಳು. ಅವಳ ಜೊತೆ ಆಗಾಗ ಮೂಲೆಮನೆಯ ವೆಂಕಮ್ಮನೂ ಜೊತೆಯಾಗುತ್ತಿದ್ದಳು. ವೆಂಕಮ್ಮ ಬಂದಳೆಂದರೆ ಅಮ್ಮನಿಗೇಕೋ ಸಮಾಧಾನ. ಅವಳು ತನ್ನ ತವರೂರು ರಾಯಚೂರಿನವಳೆಂದು ಅವಳ ಮೇಲೆ ಅಭಿಮಾನ. ಅಲ್ಲದೇ ಅವಳು ತನ್ನ ತವರೂರಿನ ವಿಷಯವನ್ನೆಲ್ಲ ಅಮ್ಮನಿಗೆ ಅರುಹುತ್ತಿದ್ದಳು. ಹೀಗೆ ವೆಂಕಮ್ಮ ಬಂದಾಗೆಲ್ಲ ಅಮ್ಮನ ಭಾಗವತ ವಾಚನ ನಿಲ್ಲುತ್ತಿತ್ತು.
       ಗಣೇಶ ತನ್ನ ಪದವಿ ಮುಗಿಸುವಷ್ಟರಲ್ಲಿ, ಅವನಿಗೆ ಮೌನವೇ ಸಂಗಾತಿಯಾಗಿತ್ತು. ಮನೆಯಲ್ಲಿ ಯಾರೊಂದಿಗೂ ಅವನು ಬೆರೆಯುತ್ತಿರಲಿಲ್ಲ. ಅವನಿಗೆ ಅದೇ ಊರಿನ ಗ್ರಂಥಾಲಯದ ಗ್ರಂಥಪಾಲಕನಾಗಿ ಕೆಲಸವೂ ಸಿಕ್ಕಿತ್ತು. ಇನ್ನೇನು , ಪುಸ್ತಕಗಳೇ ಅವನ ಸಂಗಾತಿಗಳಾಗಿದ್ದವು. ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನ ಲೈಬ್ರರಿಯಲ್ಲಿದ್ದ ಕನ್ನಡದ ಹಲವಾರು ಪುಸ್ತಕಗಳನ್ನು ಅವನು ಓದಿದ್ದ. ಬೇಂದ್ರೆ, ಕುವೆಂಪುರವರಿಂದ ರಹಮತ್ ತರೀಕೆರೆ ವರೆಗೆ ಓದಿದ್ದ. ಈಗ ಗ್ರಂಥಪಾಲಕನಾದ ಮೇಲಂತೂ ಹಳಕನ್ನಡವನ್ನು ಓದಲು ಶುರು ಮಾಡಿದ. ಆದರೂ ಅವನ ಮೌನ ಮತ್ತು ಓದು ಎಲ್ಲರನ್ನು ಕುತೂಹಲಗೊಳಿಸಿತ್ತು. ಕೆಲವೊಮ್ಮೆ ಅವನೂ ಏನೂ ಓದುತ್ತಿರಲಿಲ್ಲ. ಸುಮ್ಮನೆ ಗೋಡೆ ದಿಟ್ಟಿಸಿಕೊಂಡು ಕುಳಿತಿರುತ್ತಿದ್ದ. ಆಗಾಗ ಪಕ್ಕದೂರಿಗೆ ಹೋಗಿ ಬರುತ್ತಿದ್ದ. ಒಮ್ಮೆ ಹೋದನೆಂದರೆ ಎರಡು ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಮನೆಯವರ ಪ್ರಶ್ನೆಗಳಿಗೆ ಅವನ ಮೌನವೇ ಉತ್ತರವಾಗಿತ್ತು. ಕೆಲವು ದಿನಗಳಲ್ಲೇ ರಮೇಶನ ಗೆಳೆಯ ಅರವಿಂದ ಸುದ್ದಿಯೊಂದನ್ನು ಹೊತ್ತು ತಂದಿದ್ದ. ಪಕ್ಕದ ಊರಿನ ಸಿನಿಮಾ ಥೇಯಿಟರಿನೊದರಲ್ಲಿ ತಾನು ಗಣೇಶನನ್ನು ನೋಡಿದ್ದಾಗಿಯೂ ,ಅವನ ಜೊತೆ ಯುವತಿಯೊಬ್ಬಳಿದ್ದಳೆಂದು ಮನೆಯಲ್ಲಿ ಸುದ್ದಿಯನ್ನು ಬಿತ್ತಿದ್ದ. ಮನೆಯೆಲ್ಲಾ ಕೆಂಡ ತುಂಬಿದಂತಾಗಿತ್ತು. ಅಮ್ಮ, ಅಣ್ಣ, ಅತ್ತಿಗೆ ಮತ್ತು ಸತೀಶ ತನ್ನ ಮೇಲೆ ಎಸೆದ ಪ್ರಶ್ನೆಗಳಿಗೆ ಗಣೇಶ ಉತ್ತರವಿತ್ತಿದ್ದ. 'ಹೌದು. ನಾನು ಯುವತಿಯೊಬ್ಬಳೊಂದಿಗೆ ಸಿನಿಮಾಗೆ ಹೋಗಿದ್ದು ನಿಜ. ಅವಳ ಹೆಸರು ಕಮಲ, ಆಗಾಗ ಅವಳ ಮನೆಯಲ್ಲಿ ಇರುತ್ತಿದ್ದುದೂ ನಿಜ, ಹಾಗೆಂದು ನನಗೂ ಅವಳಿಗೂ ಯಾವುದೇ ದೈಹಿಕ ಸಂಭಂಧವೇನಿಲ್ಲ. ಅವಳು ನನ್ನ ಸಹಪಾಠಿಯ ಅಕ್ಕ. ವಿಧವೆ. ನನಗಿಂತ ಬಲ್ಲವಳು, ಒಬ್ಬ ಒಳ್ಳೆಯ ಸ್ನೇಹಿತೆ ಅಷ್ಟೆ' ಎಂದವನೇ ತನ್ನ ರೂಮಿನೊಳಗೆ ಹೊಕ್ಕಿದ್ದ, ಅವತ್ತಿನಿಂದಲೇ ಗಣೇಶನಿಗೆ ಹೆಣ್ಣು ನೋಡಲು ಎಲ್ಲರೂ ನಿರ್ಧರಿಸಿದರು. ಅದಕ್ಕ್ಯಾವುದಕ್ಕೂ ಗಣೇಶ ಕಿವಿಗೊಡಲಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಮತ್ತು ತನ್ನ ಪುಸ್ತಕಗಳು. ಇವಷ್ಟೆ ಅವನ ಲೋಕವಾಗಿದ್ದವು. ಒಮ್ಮೊಮ್ಮೆ ಕಮಲ ಅವನಿಗೆ ಕಾಫ್ಕಾನ METAMORPHOSIS ಉಲ್ಲೇಖಿಸಿ ನಗೆಯಾಡುತ್ತಿದ್ದಳು. ಗಣೇಶನಿಗೂ ಅನ್ನಿಸುತ್ತಿತ್ತು, ತಾನು ರೂಮಲ್ಲೇ ಹುಳುವಾದರೆ?. ಆವಾಗೆಲ್ಲಾ ಅಮ್ಮ, ಅಣ್ಣ, ಅತ್ತಿಗೆ, ಮತ್ತು ತಮ್ಮನ ಪಾಡನ್ನು ನೆನೆಸಿಕೊಂಡು ಅವನ ತುಟಿ ಮೇಲೆ ಸಣ್ಣ ನಗು ಹಾಯುತ್ತಿತ್ತು.
           ಗಣೇಶನ ಕೆಮ್ಮು, ಗಣೇಶನ ನಿದ್ರೆಯನ್ನಲ್ಲದೇ ಮನೆಯವರ ನಿದ್ರೆಯನ್ನು ಕೂಡ ಕೆಡಿಸಿತ್ತು. ' ಎರಡು ಎಲೆ ತುಳಸಿಯನ್ನಾದ್ರೂ ತಿನ್ನು, ಕೆಮ್ಮು ವಾಸಿಯಾಗುತ್ತೆ' ಎಂದು ಕೂಗಿದಳು ಅಮ್ಮ. ಸರಿ ಎಂದು ಮಲಗಿದ. ಮುಂಜಾನೆ ಎಲ್ಲರೂ ಉಪಾಹಾರಕ್ಕೆಂದು ಕುಳಿತಾಗ ಗಣೇಶನೂ ಅವರ ಜೊತೆಯಾದ. ಎಲ್ಲರಿಗೂ ಆಶ್ಚರ್ಯವಾಗಿತ್ತು. ಗಣೇಶನೇ ಅವರಿಗೆ ಹೇಳಿದ, ತನಗೆ ಬ್ಲಡ್ ಕ್ಯಾನ್ಸರ್ ಎಂದೂ, ಹೆಚ್ಚೆಂದರೆ ಇನ್ನು ಮೂರು ತಿಂಗಳು ಬದುಕಬಹುದೆಂದು ಡಾಕ್ಟರ್ ಹೇಳಿದ್ದಾರೆಂದ. ಎಲ್ಲರೂ ಸ್ಥಬ್ಧರಾಗಿದ್ದರು. ಯಾರಿಗೂ ಮಾತು ತೋಚುತ್ತಿಲ್ಲ. ಅಂದಿನಿಂದ ಅವನ ಜೀವನ ಶೈಲಿ ಏನೂ ಬದಲಾಗದಿದ್ದರೂ , ಮನೆಯ ಸದಸ್ಯರೆಲ್ಲರೂ ಅವನನ್ನು ವಿಚಿತ್ರ ಕನಿಕರದಿಂದ ನೋಡುತ್ತಿದ್ದರು. ಕೊನೆಗೆ ಅವನೇ ನಿರ್ಧರಿಸಿದ. ತನ್ನ, ಕೆಮ್ಮು ಮತ್ತು ಆರೈಕೆಯಿಂದಾಗಿ ಮನೆಯ ಇತರ ಸದಸ್ಯ್ರರಿಗೆ ತೊಂದರೆಯಾಗಬಾರದೆಂದು ನಿರ್ಧರಿಸಿ ಬಾಡಿಗೆ ಕೋಣೆಯೊಂದಕ್ಕೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ. ಕೆಲಸಕ್ಕೆ ರಾಜೀನಾಮೆ ನೀಡಿದ. ಊಟ ಮತ್ತು ತಿಂಡಿಗೆ ಮಾತ್ರ ಮನೆಗೆ ಬರುತ್ತಿದ್ದ. ಹುಲುಸಾಗಿ ಗಡ್ಡ ಬೆಳೆದಿತ್ತು. ಕಣ್ಣುಗಳು ಗುಳಿ ಬಿದ್ದಿದ್ದವು. ಆಗಾಗ ತಮ್ಮ ಸತೀಶನೇ ಅವನಿಗೆ ಊಟವನ್ನು ಒಯ್ಯುತ್ತಿದ್ದ. ಎರಡು ದಿನಗಳಿಂದ ಊಟಕ್ಕೆ ಬಂದಿಲ್ಲವೆಂದು, ಮತ್ತು ತಮ್ಮ ಸತೀಶ ಕಾಲೇಜಿನಿಂದ ಟೂರ್ ಗೆ ಹೋಗಿದ್ದೆಂದು, ಅಣ್ಣ ರಮೇಶನೇ ಅವನಿಗೆ ಊಟ ತಂದಿದ್ದ. ಎಷ್ಟು ಬಡಿದರೂ ಬಾಗಿಲು ತೆರೆಯದೇ ಇದ್ದಾಗ, ರಮೇಶ ತಣ್ಣಗೆ ನಡುಗಿದ. ಬಾಗಿಲು ಮುರಿದು ಒಳಹೊಕ್ಕಾಗ ಗಣೇಶ ಚಿರನಿದ್ರೆಯಲ್ಲಿದ್ದ.
             ಗಣೇಶನ ಅಂತ್ಯಕ್ರಿಯೆಗೆ ಅವಳೂ ಬಂದಿದ್ದಳು. ಅವಳ ಕಣ್ಣಂಚಿನಲ್ಲಿದ್ದ ಹನಿ ಯಾರಿಗೂ ಕಾಣಲಿಲ್ಲ. ಎಲ್ಲರ ಕಣ್ಣಲ್ಲೂ ಅವಳ ಬಗ್ಗೆ ತಾತ್ಸಾರವಿತ್ತು. ಯಾರೂ ಅಳುತ್ತಿರಲಿಲ್ಲ. ಕೆಲವು ದಿನಗಳಲ್ಲೇ ಅವನು ಅವಳ ಮನೆಯಲ್ಲಿದ್ದಾಗಲೆಲ್ಲ ಅವನು ಬರೆದ ಒಂದು ಪುಟ್ಟ ಕೃತಿಯನ್ನು ಪ್ರಕಟಿಸಲಾಯಿತು. 'ಮೀನಿನ ಹೆಜ್ಜೆ' ಎಂಬ ಆ ಸಣ್ಣ ಕಾದಂಬರಿ ಜನಪ್ರಿಯವಾಯಿತು. ಮನೆಯ ಸದಸ್ಯರೆಲ್ಲರೂ ಪುಸ್ತಕದಿಂದ ಬಂದ ರಾಯಧನದಿಂದ ಖುಶಿಯಾಗಿದ್ದರೂ, ಯಾರೂ ಆ ಪುಸ್ತಕವನ್ನು ಓದಿರಲಿಲ್ಲ. ಕೆಲವು ತಿಂಗಳುಗಳಾಯ್ತು. ಗಣೇಶನ ಪುಸ್ತಕವನ್ನು ಓದಬೇಕೆಂಬ ಕುತೂಹಲದಿಂದ ಅಮ್ಮ ಆಲದ ಮರದ ಕೆಳಗಡೆ ಕುಳಿತುಕೊಂಡಳು. ಕೆಲವು ಪುಟಗಳನ್ನು ಓದಿದ್ದಳೇನೋ , ಅವಳು ಹತ್ತಿಯ ಬತ್ತಿಗಳಿಗೆ ಕುಂಕುಮ ಹಚ್ಚುತ್ತಿದ್ದ ಕೈಗಳು ನಡುಗಹತ್ತಿದ್ದವು. ಕೈಯ ಕೆಂಪು ಅವಳು ಓದುತ್ತಿದ್ದ ಪುಟಕ್ಕೆ ಬಲವಾಗಿ ಅಂಟಿಕೊಂಡಿತು. ಕಣ್ಣುಗಳಲ್ಲಿ ಭಯದ ಛಾಯೆ ಮೂಡಿತು. ಪಟ್ಟನೇ ಕೂತಲ್ಲೇ ನೆಲಕ್ಕುರುಳಿದಳು , ಅವಳ ಪ್ರಾಣಪಕ್ಷಿ ಆಲದಮರದ ಬಿಳಲುಗಳನ್ನು ದಾಟಿ ಹಾರಿಹೋಗಿತ್ತು.
            ಹಲವು ವರ್ಷಗಳು ಉರುಳಿದವು, ರಮೇಶನ ಮಗಳು ಗೀತಾ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳಿಗೂ ಅವಳ ಚಿಕ್ಕಪ್ಪನಂತೆ ಓದುವ ಹುಚ್ಚಿತ್ತು, ಅಪ್ಪನ ಮಾತುಗಳಿಂದ ಚಿಕ್ಕಪ್ಪನ ಮೌನ ಅವಳಿಗೆ ನಿಗೂಢವಾಗಿತ್ತು. ಯಾವುದೋ ಹಳೆಯ ಸಾಮಾನುಗಳನ್ನು ಹುಡುಕುತ್ತಿದ್ದಾಗ ಗಣೇಶನ ಪುಸ್ತಕ ಅವಳನ್ನು ಆಕರ್ಷಿಸಿತ್ತು. ಓದುತ್ತಾ ಕುಳಿತಳು. ಪುಟಗಳಿಗೆ ಹತ್ತಿದ್ದ ಕೆಂಪು ಅಕ್ಷ್ರರಗಳನ್ನು ಮರೆಮಾಚಿತ್ತು. ಕುತೂಹಲ ತಡೆಯಲಾರದೆ ಲೈಬ್ರರಿಯಲ್ಲಿದ್ದ ಇನ್ನೊದು ಪ್ರತಿಯನ್ನು ತಂದು ಅದೇ ಪುಟದ ಕೆಲವು ಪ್ಯಾರಾಗಳು ಚಿಕ್ಕಪ್ಪನ ಮೌನದ ಕಾರಣವನ್ನಿತ್ತಿದ್ದವು. ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.
         ' ಅಂದು ನಾನು ಶಾಲೆಯಿಂದ ಮಧ್ಯಾಹ್ನವೇ ಮನೆಗೆ ಬಂದೆ, ಅಪ್ಪ, ಅಮ್ಮ ಮತ್ತು ನಮ್ಮ ಚಿಕ್ಕಪ್ಪ ಜೋರಾಗಿ ಕೂಗಾಡುತ್ತಿದ್ದರು. ಅಮ್ಮ ಎಂದಿನಂತೆ ದೇವರ ಸಾಮಾನುಗಳನ್ನು ತೊಳೆದು, ಒರೆಸಿ ಇಡುತ್ತಿದ್ದರು. ಅಪ್ಪ ಚಿಕ್ಕಪ್ಪನಿಗೆ ಹೇಳುತ್ತಿದ್ದರು.. 'ಮಕ್ಕಳು ದೊಡ್ಡೋರಾಗಿದ್ದಾರೆ, ಇವಾಗ್ಲಾದ್ರೂ ಬರೋದು ನಿಲ್ಲಿಸು ' . ಅಮ್ಮನ ಉತ್ತರ ಹೀಗಿತ್ತು, 'ನೀನು ಗಂಡಸಾಗಿದ್ರೆ ಅವನ್ಯಾಕೆ ಬರ್ತಿದ್ದ'. ಆದರೆ ಚಿಕ್ಕಪ್ಪ ಅಪ್ಪನಿಗೆ ಹೇಳಿದ್ದರು, 'ಆಯ್ತು, ನಾನು ಇನ್ಮೇಲೆ ಬರೋಲ್ಲ' ಎಂದು ಹೊರನಡೆದರು. ಅಮ್ಮ ನೀಲಾಂಜನವನ್ನು ಜೋರಾಗಿ ಎಸೆದು ಅಡುಗೆ ಮನೆಯತ್ತ ಹೊರಟಳು. ನಾನು ಬಂದು ನಿಂತಿದ್ದನ್ನು ಯಾರೂ ಗಮನಿಸಿರಲಿಲ್ಲ. ನಾನು ಮತ್ತೆ ಶಾಲೆಗೆ ಹೊರಟೆ, ಅಂದಿನಿಂದ ನಾನು ಯಾವತ್ತೂ ಶಾಲೆಯಿಂದ ಅರ್ಧಕ್ಕೇ ಮನೆಗೆ ಬಂದವನಲ್ಲ, ಶಾಲೆಯನ್ನು ತಪ್ಪಿಸಿದವನೂ ಅಲ್ಲ'.
Thursday, January 3, 2013 0 comments

ಈ ಹೊತ್ತಿಗೆ, ಈ ಹೊತ್ತಿಗೆ. ಭಾಗ -೩.

ನನ್ನ ತಮ್ಮ ಶಂಕರ ಪುಸ್ತಕದ ಹೂರಣವನ್ನು ಬಿಚ್ಚಿಡುವ ಪ್ರಯತ್ನದ ಎರಡನೇ ಭಾಗ ಇದು. ಮೊದಲನೇ ಭಾಗದ ಅರು ಅಂಶಗಳನ್ನು ಓದುವ ಪ್ರಯತ್ನ ಮಾಡೋಣ.

A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.

ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದ ಕಷ್ಟ ಸುಖದ ಕಥೆ ಇಲ್ಲಿರದಿದ್ದರೂ, ಅವರ ತಂದೆ ತಾಯಿಯವರು ಕಷ್ಟ ಪಟ್ಟ ಬಗ್ಗೆ  ಅನಂತನಾಗ್  ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಅವರ ದೋಣಿ ಯಾತ್ರೆ ಸಿಂದ್ ಬಾದ್ ಕಥೆಯನ್ನು ನೆನಪಿಸುತ್ತದೆ. ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯದ ಸಂಗತಿಗಳಲ್ಲಿ ಬಾಲ ಶಂಕರನಾಗ್ ನಾಯಕನಾಗುತ್ತಾರೆ.

B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು.
    ಮುಂಬಯಿಯ ಚಿತ್ರಣವನ್ನು ನಮಗೆ ಮನಮುಟ್ಟುವಂತೆ ಚಿತ್ರಿಸಿದವರಲ್ಲಿ, ಯಶವಂತ ಚಿತ್ತಾಲ ಮತ್ತು ಜಯಂತ ಕಾಯ್ಕಿಣಿಯವರು ಪ್ರಮುಖರು. ಅನಂತನಾಗ್ರೂ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಆಗಿನ ಹೊನ್ನಾವರ ಮತ್ತು ಮುಂಬಯಿಯ ಬದುಕನ್ನು ಚಿತ್ರಿಸಿದ್ದಾರೆ.

C) ೧೯೬೫ ರ ಸುಮಾರಿನ ನಾಟಕರಂಗ.
     ಅದು ಬಂಡಾಯದ ಸಮಯ. ಸಾಹಿತ್ಯದಲ್ಲೂ ಕೂಡ. ಅನಂತನಾಗ್ರ ನಾಟಕಗಳನ್ನು sidewingನಲ್ಲಿ ನೋಡುತ್ತಾ , ನಿರ್ದೇಶನ, ಮತ್ತು ನಾಟಕಗಳ ಅಂತರಂಗವನ್ನು ಅರಿತ ಶಂಕರ್ ನಾಗ್, ನಿರ್ದೇಶಕನಾಗಿ ಹೇಗೆ ಹೊರ ಹೊಮ್ಮಿದರು ಎಂಬುದನ್ನು ಮನಮುಟ್ಟುವಂತೆ ಅನಂತನಾಗ್ ಬಿಂಬಿಸಿದ್ದಾರೆ.

D) ಕ್ರಿಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
    ಬಹುಶಃ , ನಮ್ಮ ಸಮಕಾಲೀನತೆಯ ಆದರ್ಶಪ್ರಾಯವಾದ ವ್ಯಕ್ತಿ ಶಂಕರ್ ಎಂದರೆ ತಪ್ಪಾಗಲಾರದು. ಹಗಲು ಸಿನಿಮಾ ಚಿತ್ರೀಕರಣ, ರಾತ್ರಿ ನಾಟಕಗಳ ತಾಲೀಮು. ಹೀಗೆ ಯಾವಾಗಲೂ ಚಟುವಟಿಕೆಯಿಂದ ಕೂಡಿದ್ದ ಶಂಕರ್ ಒಂದು ಸ್ಫೂರ್ತಿಯ ಸೆಲೆ. ಇಂದಿನ ಯುವಜನಾಂಗಕ್ಕೆ ಶಂಕರ್ ಒಬ್ಬ ಆದರ್ಶ ವ್ಯಕ್ತ.

E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
    ಹಿಂದೆ, ಶ್ರೀಮತಿ ಇಂದಿರಾಗಾಂಧಿಯವರ ಚುನಾವಣೆಯನ್ನು ಅವರ ಮಗ ಸಂಜಯ್ ಗಾಂಧಿ ಹೇಗೆ ನಿರ್ವಹಿಸಿದನೋ, ಹಾಗೆಯೇ ಶಂಕರ್ ಅವರ ಅಣ್ಣ ಅನಂತ್ ಅವರ ಚುನಾವಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅವರ ಸಂಘಟನಾ ಚಾತುರ್ಯಕ್ಕೆ ಒಂದು ನಮನ.

F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
    ನಾವು ಯಾವುದೇ ರಂಗದಲ್ಲಿ ಜನಪ್ರಿಯರಾಗಲೀ, ಸಾರ್ವಜನಿಕವಾಗುತ್ತೇವೆ. ಅದರಲ್ಲೂ ಸಿನಿಮಾರಂಗ ನಮ್ಮನ್ನು ಜನಪ್ರಿಯತೆಯ ಉತ್ತುಂಗವನ್ನೇರಿಸುತ್ತದೆ. ಹೀಗೆ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮರೆಯಾದ ಶಂಕರ್ ಮತ್ತು ನಂತರದ ಬದುಕನ್ನು ಅನಂತ್ ಹೇಗೆ ಎದುರಿಸಿದರು ಎಂಬುದನ್ನು ಅನಂತ್ ವಿವರಿಸಿದ್ದಾರೆ.

    ಹೀಗೆ, ಶಂಕರ್ ಹುಟ್ಟಿನಿಂದ ಶುರುವಾಗುವ ಪುಸ್ತಕ, ಶಂಕರ್ ನ ಸಾವಿನೊಂದಿಗೆ ಮುಗಿಯುತ್ತದೆ. ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ, ನಿಮ್ಮಲ್ಲೊಂದು ಹೊಸ ಸ್ಪೂರ್ತಿ ಹುಟ್ಟುತ್ತದೆ, ಮತ್ತು ನಿಮ್ಮ ಕಣ್ಣು ತೇವವಾಗುತ್ತದೆ ಎಂದು ನಂಬಿದ್ದೇನೆ.
0 comments

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೨.

ಅನೇಕರು ನಮಗೆ ಸ್ಫೂರ್ತಿದಾಯಕರಾಗಿದ್ದಾರೆ. ಸ್ಫೂರ್ತಿಯ ಸೆಲೆಯನ್ನು ಹುಡುಕುವದು ಅಂಥ ಕಷ್ಟವೇನಲ್ಲ. ನಮ್ಮ ಸುತ್ತಮುತ್ತಲೇ ತುಂಬಾ ಜನ ಸಿಗುತ್ತಾರೆ. ಅದು ಇಂಥವರೇ ಎಂದಾಗಬೇಕಿಲ್ಲ, ನಮ್ಮ ತಂದೆ ತಾಯಿಗಳೇ ನಮಗೆ ಸ್ಫೂರ್ತಿಯಾದಾರು.
ಆದರೂ ಕೆಲವು ವ್ಯಕ್ತಿಗಳಿರುತ್ತಾರೆ. ಅವರ ಇರುವಿಕೆಯೂ ಸ್ಫೂರ್ತಿದಾಯಕ, ಮತ್ತು ಅವರ ನೆನಪುಗಳೂ.

ಒಬ್ಬನಿದ್ದ. ಧಾರ್ಮಿಕ ವಾತಾವರಣದಲ್ಲಿ ಹುಟ್ಟಿದ, ನೋಡಲು ದುಂಡುದುಂಡಾಗಿದ್ದ. ಮುದ್ದಾಗಿದ್ದ. ಅಣ್ಣ , ಅಕ್ಕರನ್ನು ತನ್ನ ಚೇಷ್ಟೆಯಿಂದ ಗೋಳಾಡಿಸಿದ. ಮುಗ್ಧತೆಯಿಂದ ಆಕರ್ಷಿಸಿದ, ಜಾಣ ವಿದ್ಯಾರ್ಥಿಯಂತೆ ಅಭ್ಯಸಿಸಿದ. ತಾನು ಹೋದಲ್ಲೆಲ್ಲಾ ತನ್ಣ ಛಾಪು ಮೂಡಿಸಿದ. ಅಣ್ಣನಿಗೆ ನಾಟಕ ರಿಹರ್ಸಲ್ ಮಾಡಿಸಿದ, ಅವನ ಅಭಿನಯದ ನಾಟಕಗಳನ್ನು Sidewingನಲ್ಲಿ ನೋಡುತ್ತಾ ನಾಟಕ ಕಲೆಯನ್ನು ಅಭ್ಯಸಿಸಿದ, ನಾಟಕ ನಿರ್ದೇಶಿಸಿದ. ಅಣ್ಣನ ಜೊತೆ ನಟನಾದ, ಅಣ್ಣನನ್ನು ಸೇರಿಸಿಕೊಂಡು ನಿರ್ಮಾಪಕನಾದ, ಅಣ್ಣನಿಗೆ ರಾಜಕೀಯ ಭೋಧಿಸಿದ. ೧೯೮೫ ರ ಆಗಸ್ಟ್ ೧೫ ರಂದು ಕನ್ನಡದ ಪ್ರಥಮ ಎಲೆಕ್ಟ್ರಾನಿಕ್ ಸ್ಟುಡಿಯೊ ಪ್ರಾರಂಭಿಸಿದ. ೧೯೯೦ರ ಹೊತ್ತಿಗೆ ಆತನ ಪ್ರಾಜೆಕ್ಟುಗಳ ಪಟ್ಟಿ ಹೀಗಿತ್ತು.

೧) ಬೆಂಗಳೂರಿನ ಹೊರಗಡೆ ಒಂದು ಕ್ಲಬ್. ಅದರಲ್ಲಿ ಬಿಲಿಯರ್ಡ್ಸ್ ಆಟದ ಟೇಬಲ್ಲು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಕಾರ್ಡ್ಸ್ ರೂಮ್, ಬಾರು, ರೀಡಿಂಗ್ ರೂಮ್, Bowling alley ,ಮತ್ತು ಈಜುಕೊಳ ,
೨) ಕೆನಡಾದಲ್ಲಿದ್ದಂತೆ ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಪಾರ್ಕ್
೩)ಜರ್ಮನಿ ಪದ್ಧತಿಯಂತಿ ಇಟ್ಟಿಗೆ ಕಾರ್ಖಾನೆ, ಈ ಇಟ್ಟಿಗೆಯನ್ನು ಕಡಿಮೆ ವಿದ್ಯುಚ್ಚಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ಮತ್ತು ಇದು ರಾಸಾಯನಿಕ ಇಟ್ಟಿಗೆಯಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ, ಇದರಿಂದ ಬಡವರಿಗೆ ಅನುಕೂಲಕರ.
೪)Austrian Technologyಯಿಂದ pre fabricated sheetಗಳ ಉತ್ಪಾದನೆ. ಇದರಿಂದ ಅತಿ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಕಟ್ಟಬಹುದು.
೫)ಸಿದ್ಧ ಉಡುಪಗಳ ತಯಾರಿಗೆ ಕೇಂದ್ರ.
೬)ಬೆಂಗಳೂರಿಗೆ ಮೆಟ್ರೊ ರೈಲು(೧೯೯೦ ರಲ್ಲಿಯೇ)
ಹೇಗಿದೆ?ಇದು ಆತನ ದೂರದೃಷ್ಟಿ ಮತ್ತು ಕ್ರಿಯಾತ್ಮಕ ಆಲೋಚನೆಗಳಿಗೆ ಹಿಡಿದ ಕನ್ನಡಿಯಲ್ಲವೇ? ಇಷ್ಟಕ್ಕೂ ಈತನ ವೈಯುಕ್ತಿಕ ಸಾಧನೆಗಳೇನು? ೯ ಚಿತ್ರಗಳು, ೨ ಟಿ.ವ್ಹಿ ಧಾರಾವಾಹಿಗಳ ನಿರ್ದೇಶನ, ಸುಮಾರು ೬೨ ಚಿತ್ರಗಳ ನಟನೆ, ಸುಮಾರು ನಾಟಕಗಳ ನಿರ್ದೇಶನ ಮತ್ತು ನಟನೆ, ೩ ಚಿತ್ರಗಳಿಗೆ ಚಿತ್ರಕಥೆ, ಮತ್ತು ಸ್ವತಃ ತಬಲ ಕಲಾವಿದ. ಅಲ್ಲದೇ ಕೆಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು. ಇಷ್ಟೆಲ್ಲಾ ಸಾಧಿಸಿ ಈತ ವಿಧಿವಶನಾದಾಗ ಈತನಿಗೆ ೩೬ ವರ್ಷ. ಈತನ ಹೆಸರು ಶಂಕರ.
ಇಲ್ಲಿಗೆ ಈತನ ಬಗ್ಗೆ ನಿಲ್ಲಿಸಿ, ಈತನ ಅಣ್ಣನ ಬಗ್ಗೆ ಓದೋಣ,
ಈತ ಸುಮಾರು ೮೫ ಕನ್ನಡ , ೧೦ ಹಿಂದಿ, ೧ ತಮಿಳು, ೧ ಮರಾಠಿ ಮತ್ತು ೧ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು ಸುಮಾರು ೯ ಪ್ರಶಸ್ತಿಗಳ ವಿಜೇತ, ೧೯೯೩ರ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ. ಅಪ್ರತಿಮ ಬುಧ್ಧಿಶಾಲಿ, ಈತನ ಹೆಸರು ಅನಂತ. ಈ ಅನಂತ ತನ್ನ ತಮ್ಮನ ಬದುಕಿನ ಕಥೆಯನ್ನು ಬರೆದರೆ ಹೇಗಿರುತ್ತೆ. ಶಂಕರನನ್ನು ಅತ್ಯಂತ ಹತ್ತಿರದಿದ್ದು ಕಂಡಿದ್ದು ಅನಂತ್ ಮಾತ್ರ. ಹೌದು, ಇದು ಅನಂತ ನಾಗರಕಟ್ಟೆ ತನ್ನ ತಮ್ಮ ಶಂಕರ ನಾಗರಕಟ್ಟೆ ಬಗ್ಗೆ ಬರೆದ , 'ನನ್ನ ತಮ್ಮ ಶಂಕರ ' ಪುಸ್ತಕದ ಉದ್ದೇಶ. ತನ್ನ ತಮ್ಮನ ಬಗ್ಗೆ ಬರೆದ ಅನಂತನಾಗ್ ತಮ್ಮ ಹೊರೆಯನ್ನು ಕಡಿಮೆಗೊಳಿಸಿಕೊಂಡಿದ್ದಾರೆಂದರೆ ತಪ್ಪಾಗಲಾರದು. ಇಷ್ಟಕ್ಕೂ ಈ ಪುಸ್ತಕದಲ್ಲಿರುವದೇನು? ಕೆಲವನ್ನು ಹೀಗೆ ವಿಶ್ಲೇಷಿಸಬಹುದು.ಕೆಲವು ನನ್ನ ವಿವೇಚನೆಗೆ ಒಳಪಡದೇ ಇರಬಹುದು.
A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.
B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು
C) ೧೯೬೫ ರ ಸುಮಾರಿನ ನಾಟಕರಂಗ
D) ಕ್ರೀಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
ಇವುಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಓದುವ ಪ್ರಯತ್ನ ಮಾಡೋಣ
(ಮುಂದುವರಿಯುತ್ತದೆ)
0 comments

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೧.

ಈ ಲೇಖನವನ್ನು ಓದಿ ಮುಗಿಸುವ ಹೊತ್ತಿಗೆ, ಒಂದು ಚೆಂದದ ಹೊತ್ತಿಗೆ ಓದುವ ಕುತೂಹಲ ನಿಮ್ಮಲ್ಲಿ ಬೆಳೆದಲ್ಲಿ ನಾನು ಧನ್ಯ. ಇದೊಂದು ಲೇಖನಗಳ ಸರಣಿಯಾಗಿ ಬರಬೇಕೆಂಬುದು ನನ್ನ ಹಂಬಲ. ಆವಾಗಲೇ ಈ ಲೇಖನಗಳ ಸಾರ್ಥಕ್ಯ.
ಈ ಉದ್ದೇಶದಿಂದಲೇ, ಈ ಲೇಖನಗಳ ಶೀರ್ಷಿಕೆಗೆ 'ಈ ಹೊತ್ತಿಗೆ, ಈ ಹೊತ್ತಿಗೆ.' ಎಂದು ನಾಮಕರಣ ಮಾಡಿದ್ದು. ಎಲ್ಲಾ ಸರಿ ಈ ಗೋಳು ಬೇಕಾ? ಎಂದು ನಿಮ್ಮ ಮೂಡ್ ಬದಲಾಯಿಸುವ ಮುಂಚೆ ನನಗೆ ಇವತ್ತಿನ ಪುಸ್ತಕದ ಬಗ್ಗೆ ಶುರು ಮಾಡುವೆ.
ಪುಸ್ತಕದ ಹೆಸರು:- ಚೇಳು (ಕಥಾಸಂಕಲನ)
ಲೇಖಕ: ವಸುಧೇಂದ್ರ.
ಪ್ರಕಾಶನ : ಛಂದ ಪುಸ್ತಕ, ಬೆಂಗಳೂರು.
ಬೆಲೆ : ೬೫ ರೂ.
ಚೇಳು:-
ಇದು ವಸುಧೇಂದ್ರರ ಐದು ಕಥಾ ಸಂಕಲನಗಳಲ್ಲಿ ಒಂದು. ಈ ಪುಸ್ತಕ ಏಳು ಕಥೆಗಳನ್ನೊಳಗೊಂಡಿದ್ದು, ಒಂದೊಂದು ಕಥೆಯೂ ನಿಮ್ಮನ್ನು ಕೆಣಕುತ್ತವೆ. ಪ್ರತಿಯೊಂದು ಕಥೆಯ ಕಥಾವಸ್ತು ವಿಭಿನ್ನ. ಹೀಗೆ ಪ್ರತಿಯೊಂದು ಕಥೆಯನ್ನು ವಿಭಿನ್ನವಾಗಿ , ಬಿಗಿಯಾಗಿ ಹೆಣೆಯುವಲ್ಲಿ ವಸುಧೇಂದ್ರ ಯಶಸ್ಸುಗಳಿಸಿದ್ದಾರೆ. ಕಥಾಹಂದರ ಹೇಗೆಯೇ ಇರಲಿ, ಆದರೆ ಅದರ ಒಳಮರ್ಮ ಮಾತ್ರ ಓದುಗನಂತೆಯೇ ವಿಭಿನ್ನ. ಕನ್ನಡಿಯ ಪ್ರತಿಬಿಂಬ ಹೇಗೆ ವಿಭಿನ್ನವೋ ಹಾಗೆ. ಈ ಪುಸ್ತಕದ ಮೊದಲನೇ ಕಥೆ, ಚೇಳು. ಚೇಳುಗಳ ಹಾವಳಿಯ ಅವತಾರಗಳನ್ನು ವಿವರಿಸುತ್ತಾ ಶುರುವಾಗುವ ಕಥೆ, ಊರಿಗೆ ಹೊಸದಾಗಿ ಬಂದ ಹೆಣ್ಣುಮಗಳು ವೆಂಕಮ್ಮ, ಅವಳ ಬಂಜೆತನದ ಪ್ರದೂಷಣೆಗಳು, ಎಲ್ಲವನ್ನೂ ಮೀರುವ ಅವಳ ಬಯಕೆ, ಹೀಗೆ ಸಾಗುತ್ತಿದ್ದಂತೆಯೇ, ಅವಳಿಗೆ ಚೇಳಿನ ವಿಷ ತೆಗೆಯುವ ಔಷಧ ಸಿಧ್ಧಿಸಿದ ಬಗೆ ಕಥೆಯನ್ನು ಓದಿಸಿಕೊಳ್ಳುವಲ್ಲಿ ಯಶಸ್ಚಿಯಾಗುತ್ತದೆ. ಜಾಗತೀಕರಣದ ಸೋಂಕು ನಮ್ಮ ಬದುಕನ್ನು ಬದಲಾಯಿಸುತ್ತದೆ ಎಂಬುದನ್ನು ಕಥೆಯ ಅಂತ್ಯ ವಿವರಿಸುತ್ತದೆ. ಹೀಗೆ ವೆಂಕಮ್ಮಳ ಬದುಕಿನ ಕಥೆಯನ್ನು ಹೇಳುವದರ ಜೊತೆಗೆ, ನಮ್ಮ ಸುತ್ತ ನಡೆಯುವ ಕೆಲವು ವಿದ್ಯಮಾನಗಳ ಬಗ್ಗೆ ದೀವಿಗೆ ನೀಡುವಲ್ಲಿ, ವಸುಧೇಂದ್ರ ಗೆದ್ದಿದ್ದಾರೆ.
ಕ್ಷಿತಿಜ ಹಿಡಿಯ ಹೊರಟವರು:-
ಈ ಕಥೆಯು ಸ್ವಲ್ಪ ವಿಭಿನ್ನವಾದದ್ದು. ಜಾಗತೀಕರಣ ನಮ್ಮ ಸಾಮಾಜಿಕ ಜೀವನದಲ್ಲಿ ಅಸಮತೋಲನ ಉಂಟುಮಾಡುವದಲ್ಲದೇ, ನಮ್ಮ ವೈಯಕ್ತಿಕ ಜೀವನವನ್ನು ಹದಗೆಡಿಸಬಲ್ಲದು ಎಂಬುದನ್ನು ಕಥೆ ವಿವರಿಸುತ್ತದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬಳ
ಯಶೋಗಾಥೆಯೊಂದಿಗೆ ಶುರುವಾಗುವ ಕಥೆ, ಅವಳ ವೈವಾಹಿಕ ಜೀವನದ ಕಡೆ ಇಣುಕು ಹಾಕುತ್ತದೆ. ಒಂದು ರಾತ್ರಿ ಸರಿಯಾಗಿ ಆರು ಗಂಟೆಗಳ ಕಾಲ ನಿದ್ರಿಸಲು ಅವಳು ಪಡುವ ಕಷ್ಟ, ವ್ಯಂಗವಾದರೂ ಸತ್ಯವೆನಿಸುತ್ತದೆ. ಕಥೆಯ ಆದಿಯನ್ನು ಕುತೂಹಲವಾಗಿಸುವ ಕತೆಗಾರ ಅಂತ್ಯವನ್ನು ಮಾತ್ರ ಓದುಗನಿಗೆ ಬಿಟ್ಟಿದ್ದಾನೆ. ಮಹಿಳಾ ಐ.ಟಿ ಉದ್ಯೋಗಿಗಳ ಮನಹೊಕ್ಕು ಕತೆಯಾಗಿ ಹೊರಬರುವಲ್ಲಿ ಕಥಾಹಂದರ ಕೊನೆಗೊಳ್ಳುತ್ತದೆ.
ಅನಘ:-
ವಸುಧೇಂದ್ರರ ಕಥಾವಸ್ತು ಊಹಿಸುವದು ಅವರು ಮಾತ್ರ. ಕಥೆಯ ಮೊದಲ ಕೆಲವು ಪ್ಯಾರಾಗಳಿಂದ , ಕಥೆಯ ಜಾಡು ಊಹಿಸುವದು ಕಷ್ಟ ಸಾಧ್ಯ. ಅಂತಹ ಕಥೆಗಳ ಸಾಲಿನಲ್ಲಿ ಈ ಕಥೆ ನಿಲ್ಲುತ್ತದೆ. ಹೆಣ್ಣು ಭ್ರೂಣಹತ್ಯೆಯನ್ನು ನಿಯಂತ್ರಿಸುವಲ್ಲಿ ಎಲ್ಲರ ಗಮನ
ಇರಬೇಕಾದರೆ, ಹೆಣ್ಣು ಮತ್ತು ಗಂಡು ಜಾತಿಗೆ ಸೇರದ ನಪುಂಸಕತೆಯ ಬಗ್ಗೆ, ಈ ಕಥಾಹಂದರವನ್ನು ಹೆಣೆಯಲಾಗಿದೆ. ಸೂಳೆಯರನ್ನು ಇಟ್ಟುಕೊಳ್ಳುವದೇ ಗಂಡಸ್ತನವೆಂದು ನಂಬಿರುವ ಊರ ಪ್ರಮುಖನೊಬ್ಬನಿಗೆ, ನಪುಂಸಕನಾದ ಮಗನೊಬ್ಬನಿರುತ್ತಾನೆ. ಸುಮಾರು ಹದಿನಾರು ವರ್ಷದ ಅವನಿಗೆ ಇರುವ ಲೈಂಗಿಕ ಕುತೂಹಲ, ಅದನ್ನು ತಣಿಸಿಕೊಳ್ಳುವ ಅವನ ಪ್ರಯತ್ನ ಮತ್ತು ಅದರ ಪರಿಣಾಮವನ್ನು ವಿವರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ. ಆ ಬಾಲಕನ ಮನೋಸ್ಥಿತಿಯನ್ನು ವಿವರಿಸುವಲ್ಲಿ ಕಥೆ ಎಡವಿದರೂ, ಅವನ ತಂದೆಯ ಭಾವನೆಗಳನ್ನು ವಿಷದಿಸುತ್ತದೆ.
ಹಲೋ ಭಾರತಿ: -
ಜಾಗತೀಕರಣದ ಇನ್ನೊಂದು ಮಗ್ಗುಲನ್ನು ಈ ಕಥೆ ಬಣ್ಣಿಸುತ್ತದೆ. ಅನಿವಾಸಿ ಭಾರತಿಯರ ಮನೋಸ್ಥಿತಿ ಮತ್ತು ಅವರ ವ್ಯವಹಾರಿಕ ಕುಶಲತೆ ಬಣ್ಣಿಸುವದರೊಂದಿಗೆ, ಶುರುವಾಗುವ ಕಥೆ, ಕಥಾನಾಯಕನಲ್ಲಿ ದ್ವಂದ್ವವನ್ನು ಸೃಷ್ಟಿಸುತ್ತದೆ. ಅವನು ವಿದೇಶಕ್ಕೆ ಬಂದಿರುವದೇ ಹೊಸ ಪ್ರಾಜೆಕ್ಟ್ ಗೋಸ್ಕರ. ಪಾಶ್ಚಾತ್ಯರ ಮನಸ್ಥಿತಿ, ಅವರ ಇರುವಿಕೆ, ಲೈಂಗಿಕತೆಯ ಬಗ್ಗೆ ಇರುವ ಅವರ ಉದಾರೀಕರಣ!ದ ಬಗ್ಗೆ ವಿವರಿಸುವಲ್ಲಿ ಕಥೆ ಸಾಗುತ್ತದೆ. ಲೈಂಗಿಕತೆಯ ಬಗ್ಗೆ ಜನರಲ್ಲಿರುವ ಕುತೂಹಲವನ್ನು ಲಾಭಕರವಾಗಿ ಬಳಸಿಕೊಳ್ಳಲು ಬಯಸುವ ಯುರೋಪಿನ ಕಂಪನಿ , ತನ್ನ ಪ್ರಾಜೆಕ್ಟ್ ನ್ನು ಭಾರತೀಯ ಕಂಪನಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದರೆ, ಅದು ತಮ್ಮನ್ನು ನಿರುದ್ಯೋಗಿಗಳನ್ನಾಗಿಸುತ್ತದೆ ಎಂಬ ಭಯ ಅಲ್ಲಿನ ಉದ್ಯೋಗಿಗಳದ್ದು. ಇವೆಲ್ಲವನ್ನೂ ಮೀರಿದ್ದು ವ್ಯವಹಾರಿಕತನ. ಇಲ್ಲಿಗೆ ಕಥೆ ಮುಗಿಯುತ್ತದೆ ಮತ್ತು ನಮ್ಮ ನೈತಿಕತೆಯನ್ನು ಪ್ರಶ್ನಿಸುತ್ತದೆ.
ಹೊಟ್ಟೆಯೊಳಗಿನ ಗುಟ್ಟು:-
ಈ ತರಹದ ಕಥೆಗಳನ್ನು ನಾವು ತುಂಬಾ ಓದಿದ್ದುಂಟು, ನೋಡಿದ್ದುಂಟು. ಆದರೆ ಕಥೆಯನ್ನು ಹೆಣೆಯುವಲ್ಲಿ ಕಥೆಗಾರ ವಿಭಿನ್ನ ದಾರಿಯನ್ನು ಅನುಸರಿಸುತ್ತಾನೆ. ಒಬ್ಬ ಹೆಣ್ಣುಮಗಳ ಅಂತ್ಯಕ್ರಿಯೆ ಮತ್ತು ಪಿಂಡಪ್ರದಾನದೊಂದಿಗೆ ಕಥೆ ಬಿಚ್ಚಿಕೊಳ್ಳುತ್ತದೆ. ಪಿಂಡಪ್ರದಾನದ ಪ್ರಾಮುಖ್ಯತೆಯನ್ನು ವಿವರಿಸುವದರೆಲ್ಲಿಯೇ ಅವಳ ಮಕ್ಕಳ ಮತ್ತು ಸಂಭಂಧಿಕರ ಮನೋಸ್ಥಿತಿಯನ್ನು ಹೇಳಲಾಗಿದೆ. ಕೊನೆಗೆ ಅವರ ಮನೆಯ ಕೆಲಸದಾಳು ನೆರವಾಗುವ ಹೊತ್ತಿಗೆ ಕಾಗೆಪಿಂಡ ಪ್ರಹಸನ ಕೊನೆಗೊಳ್ಳುತ್ತದೆ. ನಂತರ ಕೆಲಸದಾಳು ಮತ್ತು ಮೃತವ್ಯಕ್ತಿಯ ಸಂಭಂಧದ ಬಗ್ಗೆ ವಿವರಿಸುವ ಹೊತ್ತಿಗೆ ,ಅಂತಃಕರಣ, ಪ್ರೀತಿ ವಿಶ್ವಾಸಗಳು ಬರೀ ರಕ್ತಸಂಬಂಧದಿಂದಲೇ ಬರುತ್ತವೆ ಎಂಬುದನ್ನು ಸುಳುಮಾಡುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಗುಳ್ಳೆ:-
ಕೆಲವೊಂದು ಸಾರಿ ಹೀಗಾಗುತ್ತೆ. ನಾವು ನಮಗೆ ತಿಳಿದಂತೆ ಮಾಡುತ್ತೇವೆ. ಅದು ಸರಿಯೇ ಇರಬಹುದು. ಆದರೆ ಅದು ಇನ್ನೊಬ್ಬರಿಗೆ ತೊಂದರೆ ಕೊಟ್ಟಿರಲೂಬಹುದು. ತೊಂದರೆ ಕೊಟ್ಟಿದ್ದು ನಿಜವಾದಲ್ಲಿ, ಅದು ನಮ್ಮನ್ನು ಹಿಂಸಿಸುತ್ತದೆ. ನಮ್ಮ ಅನಿಸಿಕೆ, ಅಭಿಪ್ರಾಯ ಸರಿ ಇದ್ದಾಗಲೂ ಹೀಗಾಗುವದುಂಟು. ಇದನ್ನೇ ಕಥಾವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ. ಕಥಾನಾಯಕ ಐ.ಟಿ ಕಂಪನಿಯೊಂದರ ಜವಾಬ್ದಾರಿ ಸ್ಥಾನದಲ್ಲಿರುವಾತ. ಅವನ ಕೆಳಗೆ ಕೆಲಸ ಮಾಡುವಾತ, ನಕಲಿ ಪ್ರಮಾಣಪತ್ರ ಮತ್ತು ದಾಖಲೆಗಳಿಂದ ನೌಕರಿ ಗಳಿಸಿಕೊಂಡಿರುವಾತ. ಇದೆಲ್ಲ ಕಥಾನಾಯಕನಿಗೆ ತಿಳಿದು, ಅವನನ್ನು ಕಂಪನಿಯಿಂದ ಹೊರದೂಡುತ್ತಾನೆ. ಅವನ ಗೋಳು ಮತ್ತು ಅಂಗಲಾಚುವಿಕೆ ಕಥಾನಾಯಕನಲ್ಲಿ ಕರುಣೆಮೂಡಿಸುವದಿಲ್ಲ. ಕೆಲವು ದಿನಗಳ ನಂತರ ಅಕಸ್ಮಾತ್ತಾಗಿ ಸಿಕ್ಕ ಅವನನ್ನು ಕಥಾನಾಯಕ ಎದುರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಶ್ರೀದೇವಿ ಮಹಾತ್ಮೆ: -
ಸಾಫ್ಟ್ ವೇರ್ ಉದ್ಯೋಗಿಯೊಬ್ಬಾತ ತನ್ನ ಮನೆ ಕೆಲಸದ ಹುಡುಗಿಯ ಮನಸ್ಥಿತಿ ಮತ್ತು ಅವಳಿಗೆ ಸಹಾಯ ಮಾಡಲಿಕ್ಕಾಗದ ಅವನ ಅಸಹಾಯಕತೆ, ನಮ್ಮ ಸುತ್ತಮುತ್ತಲಿನ ಬಗ್ಗೆ ನಮ್ಮ ಉದಾಸೀನತೆಯ ಬಗ್ಗೆ ಕೆಣಕುವ ಕಥೆ ಇದಾಗಿದ್ದು, ಅಂತರ್ ಜಾತೀಯ ವಿವಾಹ ಅದರಿಂದಾಗುವ ಜಾತಿ ಪರಿವರ್ತನೆಯ ಬಗೆ, ಮತ್ತು ಕೆಳವರ್ಗದ ಬದುಕಿನೆಡೆಗಿನ ಮನಸ್ಥಿತಿಯನ್ನು ಕಥೆ ಬಿಚ್ಚಿಡುತ್ತದೆ. ಕಥಾನಾಯಕ ತನ್ನ ಅಪಾರ್ಟ್‌ಮೆಂಟಿನಿಂದ ಎರಡು ಕೊಡ ನೀರು ಕೊಡಲಾಗದ ಪರಿಸ್ಥಿತಿ ನಮ್ಮನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ ಅವನ ಕೆಲಸದಾಳು ಶ್ರೀದೇವಿಯ ಮುಗ್ಧತೆ ಮತ್ತು ಬಾಲಿಶತನ ನಮ್ಮನ್ನು ಆವರಿಸುತ್ತದೆ. ಅವಳು ಅಂತರ್ ಜಾತಿಯ ಹುಡುಗನನ್ನು ಮದುವೆಯಾಗುವದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ.
 
Wednesday, January 2, 2013 0 comments

ಬಿಳಿಟೋಪಿ


'ನಾನು ಆಟೋ ಡ್ರೈವರ್ ಆಗಿದ್ದು ನನಗೆ ಅಸಹಜವೇನೂ ಅನ್ನಿಸಲಿಲ್ಲ. ಆದರೆ ಆಕಸ್ಮಿಕವಾಗಿತ್ತು. ಹಳೆಯ ಪ್ರೇಯಸಿಯ ಹಠಾತ್ ಭೇಟಿಯ ಥರ. ನಮ್ಮ ತಂದೆ ಕೂಡಾ ಆಟೋ ಡ್ರೈವರ್. ಆಟೋ ಓಡಿಸುತ್ತಲೇ ನಮ್ಮನ್ನೆಲ್ಲ ಓದಿಸಿದ್ದರು. ನಾನೂ ಕೊನೆಯ ವರ್ಷದ ಬಿ.ಬಿ.ಎ ಮಾಡುತ್ತಿದ್ದೆ. ಅಷ್ಟರಲ್ಲಿ ಅಪ್ಪನಿಗೆ ಹೃದಯರೋಗ ಶುರುವಾಯಿತು. ಡಾಕ್ಟರಂತೂ ಆಟೋ ಓಡಿಸುವದು ಬೇಡವೆಂದಿದ್ದರು. ಮನೆಯ ಖರ್ಚು, ಅಪ್ಪನ ಔಷಧಿ ಖರ್ಚು, ಮತ್ತು ತಂಗಿಯ ಮದುವೆಯ ಖರ್ಚಿಗಾಗಿ ನಾನು ಆಟೋ ಓಡಿಸಲು ಶುರು ಮಾಡಿದೆ. ಮೊದಮೊದಲು ಬೇಜಾರಾಗುತ್ತಿತ್ತು. ನಂತರ ರೂಢಿಯಾಯಿತು. ಈಗ ಆರಾಮವಾಗಿದ್ದೇನೆ ಸಾರ್ ' ಎಂದೆ. ಗಿರಾಕಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದೆ. ಅವನ ಪ್ರಶ್ನೆ ಹೀಗಿತ್ತು. ನೀನು ಇಷ್ಟ ಪಟ್ಟು ಗಾಡಿ ಓಡಿಸ್ತೀಯ? ಅಥವಾ ಅನಿವಾರ್ಯತೆಯಾ?

ಕೆಲವೊಂದು ಗಿರಾಕಿಗಳು ಈ ಥರ ವಿಚಿತ್ರ ಪ್ರಶ್ನೆ ಕೇಳುತ್ತಾರೆ. ಅವನೇಕೋ ನನ್ನ ಉತ್ತರದಿಂದ ಸಮಾಧಾನವಾಗಿದ್ದ ಎಂದೆನಿಸಲಿಲ್ಲ. ಮರು ಪ್ರಶ್ನೆ ಎಸೆದೆ. ' ಸಾರ್, ನೀವು ಏನ್ ಕೆಲಸ ಮಾಡ್ತೀರ?' . ' ನಾನೊಬ್ಬ ಪತ್ರಕರ್ತ, ಆಗೊಮ್ಮೆ ಈಗೊಮ್ಮೆ ಕಥೆ ಬರೀತೀನಿ' ಎಂದ. ಕೈಯಲ್ಲಿದ್ದ ಸಿಗರೇಟಿನ ನೆನಪಾದಂತೆ ಜೋರಾಗಿ ಹೊಗೆ ಎಳೆದ. ' ಈ ಆಟೋ ಡ್ರೈವರ್ ಗಳು ಯಾಕೆ ಈ ಥರ ಇರ್ತಾರೆ ' ಎಂದ.' ಈ ಥರ ಅಂದ್ರೆ? ' ಅವನ ಪ್ರಶ್ನೆಗೆ ನನ್ನ ಮರು ಪ್ರಶ್ನೆ. ' ಯಾವಾಗಲೂ ಜನರಿಗೆ ಮೋಸ ಮಾಡೋಕೆ ನೋಡೋದು, ಕರೆದ ಕಡೆ ಬರೋಲ್ಲ ಅನ್ನೋದು, ಹೆಚ್ಚಿಗೆ ಹಣ ಪೀಕೋದು. ಯಾಕೆ ಹೀಗೆ.? ಅವರು ಪ್ರಾಮಾಣಿಕವಾಗಿ ಇರಲಿ ಅಂತ ನಾವು ಬಯಸೋದು ತಪ್ಪಾ?' . 'ಸರ್, ಕಾರಣಗಳು ನೂರಾರು ಇರುತ್ವೆ. ರಾತ್ರಿ ನಾವು ಗಿರಾಕಿ ಕರೆದ ಕಡೆ ಹೋಗೋಕೆ ಹಿಂದೇಟು ಹಾಕ್ತೇವೆ, ಯಾಕಂದ್ರೆ, ನಾವು ನಮ್ಮ ಮನೆ ಕಡೆ ಹೋಗೋ ಸಮಯ ಆಗಿರುತ್ತೆ, ಅದಕ್ಕೆ ಅದೇ ಕಡೆ ಹೋಗೋ ಗಿರಾಕಿಗಾಗಿ ಹುಡುಕ್ತೇವೆ. ಇಲ್ಲ, ಗಿರಾಕಿ ಹೇಳಿದ ಏರಿಯಾ ಸರಿ ಇರಲ್ಲ. ನಮಗೂ ಮನೆ ಮಠ ಅಂತ ಇದೆ ಅಲ್ವ ಸರ್., ಹೆಚ್ಚಿಗೆ ಹಣ ಯಾಕೆ ಕೇಳ್ತೀವಿ ಅಂದ್ರೆ, ವಾಪಸ್ ಬರೋಕೆ ಗಿರಾಕಿ ಸಿಗಲ್ಲ ಅಥವಾ ನಮಗೂ ಹಣದ ಅಡಚಣೆ ಇರುತ್ತೆ, ಇವ್ಯಾವುದೂ ಇಲ್ಲದೇನೂ ಸ್ವಲ್ಪ ಜನ ಜಾಸ್ತಿ ಹಣ ಕೇಳ್ತಾರೆ, ರಾವಣ ಇದ್ದರೆ ಅಲ್ಲವೇ ರಾಮಾಯಣ. ಅಲ್ಲದೆ ಕೆಲವೊಂದು ಅನುಭವಗಳಿಂದ ಅವರು ಬದಲಾಗಿರ್ತಾರೆ'. ಕೊನೆಯ ವಾಕ್ಯ ಮಾತ್ರ ಅವನ್ ಗಮನ ಸೆಳೆಯಿತು, 'ಅನುಭವ ಅಂದ್ರೆ?', ಎಂದ. 'ನೋಡಿ ಸಾರ್, ನಾನು ಆಟೋ ಓಡ್ಸೋಕೆ ಶುರು ಮಾಡ್ದಾಗಿನಿಂದ ತುಂಬ ಪ್ರಾಮಾಣಿಕ. ಒಂದು ಸಾರಿ, ಊರ ಹೊರಗಡೆ ಏರಿಯಾದಿಂದ ಮರಳುತ್ತಿದ್ದೆ. ಸ್ವಲ್ಪ ಮುಂದೆ ಬಂದಿದ್ದೆ, ಇಬ್ಬರು ಮಧ್ಯವಯಸ್ಕರು ರಸ್ತೆ ಪಕ್ಕದಲ್ಲಿ ನಿಂತು ಆಟೋ ನಿಲ್ಲಿಸುವಂತೆ ಕೈ ಮಾಡಿದರು, ಇಬ್ಬರೂ ಚೆನ್ನಾಗಿ ಕುಡಿದಿದ್ದರು. ಒಬ್ಬ, ಇನ್ನೊಬ್ಬನ ವಿಳಾಸವನ್ನು ಒಂದು ಚೀಟಿಯಲ್ಲಿ ಬರೆದು, ಐವತ್ತು ರೂಪಾಯಿ ನೋಟಿನೊಂದಿಗೆ ನನ್ನ ಕಿಶೆಯಲ್ಲಿಟ್ಟ. ಅವ್ರನ್ನು ಅವರ ಮನೆಗೆ ತಲುಪಿಸು ಎಂದು ಕತ್ತಲಲ್ಲಿ ಮರೆಯಾದ. ನಾನು ಅವರ ವಿಳಾಸವನ್ನು ನೋಡಿಕೊಂಡು ಅವರ ಮನೆಯತ್ತ ಆಟೋ ಓಡಿಸಿದೆ. ಅವರ ಮನೆ ಮೊದಲನೇ ಮಹಡಿಯಲ್ಲಿತ್ತು. ಅವರ ಒಂದು ಕೈಯನ್ನು ನನ್ನ ಭುಜದ ಮೇಲೆ ಹಾಕಿಕೊಂಡು ಅವರನ್ನು ಕರೆದೊಯ್ದೆ ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಧಡೂತಿ ಹೆಂಗಸೊಬ್ಬಳು ಬಾಗಿಲು ತೆರೆದು ನನ್ನನ್ನೊಮ್ಮೆ, ತನ್ನ ಗಂಡನನ್ನೊಮ್ಮೆ ದುರುಗುಟ್ಟಿ ನೋಡಿದಳು. ನನಗ್ಯಾಕೋ ಹಿಡಿಂಬೆಯ ನೆನಪಾಯಿತು, 'ನೀನ್ಯಾಕೆ ಮೇಲೆ ತನಕ ಕರ್ಕೋಂಡು ಬಂದೆ, ಕೆಳಗೆ ಬಿಟ್ಟು ಹೋಗ್ಬಹುದಿತ್ತಲ್ವಾ? ಈಗ ನೋಡು , ಅಕ್ಕ ಪಕ್ಕದ ಮನೆಯವ್ರಿಗೆಲ್ಲ ಗೊತ್ತಾಗುತ್ತೆ, ಇವರು ಕುಡ್ಕೊಂಡು ಮನೆಗೆ ಬಂದ್ರು ಅಂತ, ಎಂದು ನನ್ನ ಬಯ್ಯೋಕೆ ಶುರು ಮಾಡಿದಳು.ಸಣ್ಣಗೆ ನಾನು ಅಲ್ಲಿಂದ ಕಾಲ್ಕಿತ್ತೆ. ಸ್ವಲ್ಪ ದೂರ ಹೋಗಿದ್ದೆ, ಹಿಂದಿನ ಸೀಟಿನಿಂದ ಮೊಬೈಲ್ ರಿಂಗ್ ಆಗೋಕೆ ಶುರು ಮಾಡಿತು, ಪಾಪ ಎಣ್ಣೆ ಗಿರಾಕಿ ಮೊಬೈಲ್ ಆಟೋದಲ್ಲಿ ಬಿದ್ದಿತ್ತು. ಮತ್ತೆ ಹೋಗಿ ವಾಪಸ್ ಕೊಟ್ಟು ಬರೋದೆ ಸರಿ ಎಂದುಕೊಂಡವನೇ ಅವರ ಮನೆಗೆ ಹೋದೆ. ಬಾಗಿಲು ತೆಗೆದೇ ಇತ್ತು, ಒಳಗಡೆಯಿಂದ ಹಿಡಿಂಬೆಯ ಬೈಯ್ಗುಳಗಳು ಕೇಳಿಸುತ್ತಿದ್ದವು. ನಾನು ಮೆಲ್ಲಗೆ ಕೂಗಿದೆ, ಹಿಡಿಂಬೆಗೆ ನನ್ನ ಕೂಗು ಕೇಳಿಸಲಿಲ್ಲ. ನಾನೇ ಧೈರ್ಯವಾಗಿ ಒಂದು ಹೆಜ್ಜೆ ಒಳಗಿಟ್ಟೆ, ಧುತ್ತನೇ ಬಂದಳು ಹಿಡಿಂಬೆ, ಬಂದವಳೇ ಏನು ಎಂದಳು, ಮೊಬೈಲ್ ಕೈಗಿತ್ತೆ, ಹೊರನಡೆದೆ, ಧಡ್ ಎಂದು ಬಾಗಿಲು ಹಾಕಿಕೊಂಡಳು. ಮನಸ್ಸು ಕಹಿಯಾಗಿತ್ತು ಸರ್' ಎಂದೆ. ಪತ್ರಕರ್ತ ಗಿರಾಕಿ ಸಿಗರೇಟಿನಲ್ಲಿ ಮೈಮರೆತಿತ್ತು. ' ಇನ್ನೊಂದ್ಸಲ ಹೀಗಾಯ್ತು ಸರ್, ಒಂದು ಮದುವೆ ಛತ್ರಕ್ಕೆ ಡ್ರಾಪ್ ಇತ್ತು. ಮೂರು ಜನ ಹೆಂಗಸ್ಸ್ರು. ಅದು ಇದು ಅಂತ ಮಾತಾಡ್ತಾ ಒಂದು ಸೀರೆಯನ್ನು ಆಟೋದಲ್ಲೆ ಬೀಳಿಸ್ಕೊಂಡು ಹೋಗಿದ್ದ್ರು, ಅಪರನ್ನು ಹುಡುಕಿ ವಾಪಸ್ ಕೊಡೋಕೆ ಹೋದ್ರೆ, ಆಯಮ್ಮ, ಇನ್ನೊಬ್ಬಳಿಗೆ ಕೇಳಿದ್ಲು, ನೋಡೆ, ಸೀರೆ ಬದಲಾಯಿಸಿದಾನಾ ಏನು ಅಂತ ನೋಡ್ಕೋ ಇವಾಗಲ್ಲೇ ಅಂದ್ಲು, ಮತ್ತೆ ಬೇಜಾರಾಯ್ತು ಸಾರ್ , ಅದಕ್ಕೆ ಪ್ರಾಮಾಣಿಕತೆಗೆ ಬೆಲೆ ಇಲ್ವ ಅಂತ ಅನ್ನಿಸುತ್ತೆ ' ಎಂದೆ. ಅದಕ್ಕೆ ಪತ್ರಕರ್ತ ಗಿರಾಕಿ,' ಪ್ರಾಮಾಣಿಕತೆಗೆ ಪರೀಕ್ಷೆಗಳು ಜಾಸ್ತಿ, ಚಿನ್ನ ಎಷ್ತು ಸುಡುತ್ತೋ ಅಷ್ತು ಶುಧವಾಗುತ್ತೆ. ನೀನು ಮಾತ್ರ ನಿನ್ನ ಪ್ರಾಮಾಣಿಕತೆಯನ್ನು ಬಿಡಬೇಡ, ಎಂದ. ಅವ ಮನೆಯೂ ಹತ್ತಿರವಾಗಿತ್ತು. ಮೀಟರ್ ನೋಡಿದೆ, ೧೪೭.೦೦ ಎಂದು ತೋರಿಸುತ್ತಿತ್ತು. ೧೫೦ ರೂಪಾಯಿ ಕೊಟ್ಟವನೇ, 'Keep the change ' ಎಂದವನೇ ಕೆಳಗಿಳಿದು ಹೊರಟ.

ಹೀಗೆಯೆ ಕೆಲವು ದಿನಗಳಾದವು. ಸಿಹಿ ಕಹಿ ಅನುಭವಗಳಿದ್ದರೂ ನಾನು ನನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೆ. ಅವತ್ತೊಂದು ದಿನ, ದಿನಪತ್ರಿಕೆ ಓದುತ್ತಿದ್ದೆ. ಬಹುಮಾನಿತ ಕಥೆಯೊಂದು ಪ್ರಕಟವಾಗಿತ್ತು. ಓದುತ್ತಾ ಹೋದೆ, ಅದು ನನ್ನದೇ ಕಥೆಯಾಗಿತ್ತು. ಆ ಪತ್ರಕರ್ತ ಗಿರಾಕಿ, ನನ್ನ ಕಥೆಯನ್ನು ಸುಂದರವಾಗಿ ಹೆಣೆದಿದ್ದ. ಪ್ರಾಮಾಣಿಕತೆಗೆ ಬೆಲೆ ಇದೆ ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದ. ನನಗೂ ಖುಷಿಯಾಯಿತು. ಅವನನ್ನು ಅಭಿನಂದಿಸೋಣ ಎಂದು ಅವನ ಮನೆಗೆ ಹೋದೆ, ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಪತ್ರಕರ್ತ ಹೊರಗೆ ಬಂದ, 'ಕಂಗ್ರಾಚ್ಯುಲೇಶನ್ ಸರ್, ನನ್ನ ಕಥೆಯನ್ನು ಚೆನ್ನಾಗಿ ಬರೆದಿದ್ದೀರಾ, ಪ್ರಾಮಾಣಿಕತೆಗೆ ಬೆಲೆ ಇದೆ ಅಂತ ತೋರಿಸಿದ್ದೀರಿ. ತುಂಬಾ ಖುಷಿಯಾಯ್ತು ಸರ್' ಎಂದೆ. ' ಅರೆ, ಯಾರು ನೀನು, ಇಲ್ಲಿಗ್ಯಾಕೆ ಬಂದೆ, ಒಬ್ಬ ಆಟೋ ಡ್ರೈವರ್ ಕಥೆ ಬರೆದ್ರೆ ಅದು ನಿಂದೇ ಹೇಗಾಗುತ್ತೆ, ಅದು ನನ್ನ ಕಲ್ಪನೆಯಲ್ಲಿ ಮೂಡಿದ ಕಥೆ. ನಡೆ ಇಲ್ಲಿಂದ ' ಎಂದವನೇ ಧಡಾರನೇ ಬಾಗಿಲು ಹಾಕಿಕೊಂಡ. ನಾನು ನನ್ನ ಆಟೋ ಕಡೆಗೆ ಭಾರವಾದ ಹೆಜ್ಜೆ ಹಾಕಿದೆ. ಹತ್ತಿರದ ಶಾಲೆಯೊಂದರಿಂದ ರಘುಪತಿ ರಾಘವ ರಾಜಾರಾಮ್ ಕೇಳಿಸುತ್ತಿತ್ತು. ಅಂದು ಗಾಂಧಿ ಜಯಂತಿಯಾಗಿತ್ತು.
 
;