ಯುಗಾದಿಯ ಸಂಧರ್ಭದಲ್ಲಿ ಪ್ರಕೃತಿಮಾತೆಗೊಂದು ಪತ್ರ
ಹೊಸತು ಉಡುವ ಸಡಗರದಲ್ಲಿ ಹಳೆಯದನ್ನು ಮರೆಯದಿರು,
ವಸನ ಹೊಸದಾದರೇನು ನೀನು ಹಳತು.
ಹುಟ್ಟುಹಬ್ಬವು ಇದು ನಿನಗೆ,
ಮರುಜನ್ಮವಂತೂ ಅಲ್ಲ,
ಇರುವ ಪಯಣವ ಮುಗಿಸು,
ಹೊಸತು ಬೇಕೇನೀಗ?
ಕಲ್ಲು ಮುಳ್ಳುಗಳ ಸಂತೆ ದಾರಿಯಲಿ ತುಂಬಿರಲು ,
ನಗೆಯು ನಗುತಿರಲಿ ನಿನ್ನ ತುಟಿಯ ಅಂಚಲ್ಲಿ,
ಗಾಯವು ಮಾಯುತಿರಲು , ನೋವ ಮರೆಯಿನ್ನು .
ಸಾಗುತಿರಲಿ ಈ ನಿನ್ನ ಅನಂತ ಪಯಣ.
ನಿನ್ನ ದಾರಿಯಲ್ಲೇ ಬರುವ ಸಹಯಾತ್ರಿಕನು ನಾನು,
ಮುನ್ನಡೆಸು ನನ್ನನು ನನ್ನ ಗಮ್ಯದ ಕಡೆಗೆ.
ಜೀವನಾಧಾರವಾದ ಈ ನಿನ್ನ ಮಮಕಾರ
ಮರೆಯೆನು ನಾನು ಈ ಮಹದುಪಕಾರ.
ಕೋಗಿಲೆಯ ಗಾನದಲಿ, ಮಾವಿನ ತಂಪಿನಲಿ,
ಆಚರಿಸು ಈ ನಿನ್ನ ಜನುಮದಿನ.
ಪ್ರೀತಿ ಪ್ರೇಮವ ಬೆಳೆಸಿ, ಮನುಕುಲವು ಇರುವಂತೆ ,
ಹರಸು ಈ ನಿನ್ನ ಕುಡಿಗಳನ್ನ.
Subscribe to:
Post Comments (Atom)
0 comments:
Post a Comment