Monday, June 7, 2010 2 comments

ನ್ಯಾನೋ ಕತೆಗಳು

-4-
ಘೋರ ಬರಗಾಲ.ಊರೆಲ್ಲಾ ಪಾಳು ಗುಡಿಯಂತಾಗಿದೆ .ಹಸಿವು ತನ್ನ ಕೆನ್ನಾಲಿಗೆ ಚಾಚಿತ್ತು. ಮನುಷ್ಯ ಮೃಗವಾಗಿದ್ದ. ಕೈಗೆ ಸಿಕ್ಕ ಪ್ರಾಣಿಯನ್ನು  ಹಸಿಹಸಿಯಾಗಿ ತಿನ್ನುವಷ್ಟರ ಮಟ್ಟಿಗೆ ಹೊಟ್ಟೆ, ಬುದ್ಧಿಯನ್ನು ಆಕ್ರಮಿಸಿತ್ತು. ಹೀಗಿರುವಂತಲ್ಲೊಬ್ಬ ಹೊಂಚು ಹಾಕಿ ಕುಳಿತಿದ್ದ. ಕತ್ತಲೆಯಾಗುತ್ತಿದೆ. ಯಾರದೂ ಸುಳಿವಿಲ್ಲ. ಅಸಹನೆ ಹಸಿವಿನಂತೆ ಹೆಚ್ಚುತ್ತಿದೆ. ಅಷ್ಟರಲ್ಲೇ ಯಾರೋ ಬರುತ್ತಿರುವ ಸದ್ದು. ಹಾವು ಕಪ್ಪೆಗಾಗಿ ತೋರಿಸುವ ನಿಶ್ಯಬ್ದ. ಆಕೃತಿ ಹತ್ತಿರವಾಗುತ್ತಿದೆ. ಮುನಿದ ಚಂದ್ರನ ಬೆಳಕು ಆಕೃತಿಯ ಚಹರೆಯನು ತೋರಿಸಲು ಅದು ಅವರಪ್ಪನದಾಗಿತ್ತು.
-3-
" ನೆನ್ನೆಯ ರಾತ್ರಿ! ಭಯಂಕರ! ಕನಸೇ ಅದು? ನನ್ನ ಕೆಪ್ಯಾಸಿಟಿಗೆ ಚಾಲೆಂಜ್. ಬರಿ ನಾಲ್ಕು ಪೆಗ್ಗಿಗೆ ನಾನು ಔಟಾಗುವದೇ ? ?ನನ್ನ ಕಾರು ಕೃಷ್ಣನ ಸುದರ್ಶನ ಚಕ್ರದಂತೆ, ನನ್ನ ಮಾತು ಮೀರುವದಿಲ್ಲ . ನಾನು ಅಪಘಾತದಲ್ಲಿ ಸಾಯುವನಲ್ಲ. ಅದೂ ಕನಸಿನಲ್ಲಿ ನಡೆದ ಥರ. ಸಾಧ್ಯವಿಲ್ಲ. ಕನಸಿನಲ್ಲಿ ನಡೆದಿದ್ದಾದರೂ  ಏನು  ?ಫೋನ್ ನಲ್ಲಿ ಮಾತಾಡುವಾಗ ಎದುರಿಗೆ ಬಂದ ಲಾರಿಯ ಹೆಡ್ ಲೈಟ್ ನ ಬೆಳಕು ನನ್ನ ಸ್ಟಿಯರಿಂಗ್ ನ ಹಿಡಿತ ತಪ್ಪಿಸುವದೇ? ಸಾಧವಿಲ್ಲ". ಅಷ್ಟರಲ್ಲೇ ನೆನಪಾಗುತ್ತೆ ಫೋನ್ ಬಾರಲ್ಲೇ ಮರೆತಿರುವೆನೆಂದು. ಗಕ್ಕನೆ ಬ್ರೇಕ್ ತುಳಿದ. 
ಮರುದಿನ ದಿನಪತ್ರಿಕೆಯಲ್ಲೊಂದು ಸುದ್ದಿ. " ಬ್ರೇಕ್ ಫೇಲ್ : ಸಾಫ್ಟವೇರ್ ಉದ್ಯೋಗಿ ಸಾವು"

-2-
ಸಮಯ ಹನ್ನೊಂದು ಗಂಟೆ. ಅಲ್ಲಲ್ಲಿ  ತೂರಾಡುವ  ಜನ ಮತ್ತು ತೂರಾಡದಿದ್ದರೂ ಕುಡುಕ-ಕೆಡುಕ ಜನಗಳ ಗುಂಪು. ಔಪಚಾರಿಕತೆಯ  ಪೋಲಿಸ್ ಬೂಟುಗಳ ಸದ್ದು. ಕುಡುಕರ ವಾದ ವಾಗ್ವಾದಗಳು ಅಸೆಂಬ್ಲಿ ಹಾಲ್ ನಂತೆಯೇ ತಾರಕಕ್ಕೇರಿತ್ತು. ಅದರಲ್ಲೊಬ್ಬ ಜಾಣ,ಸಭ್ಯ(?) ಕುಡುಕನೊಬ್ಬ ಹೀಗೆ ಹೇಳಿಕೊಳ್ಳುತ್ತಿದ್ದ. "ಎಡಗೈಲಿ ಗ್ಲಾಸ್ ಎತ್ತಿದರೆ ಬಲಗೈಗೆ ಗೊತ್ತಾಗಬಾರದು.ಕುಡಿದರೂ ಕುಡಿಯದಂತಿರಬೇಕು ಕುಡಿದಾಗ ಸಹನೆ ಇರಬೇಕು. ನಾಲಿಗೆ ಉದ್ದ ಆಗಬಾರದು. ಇವರಿಗೆಲ್ಲ ಬುಧ್ಧಿ ಇಲ್ಲ. ಕುಡಿದು, ಒದರಾಡಿ  ನಿಶೆ ಇಳಿಸಿಕೊಳ್ಳುತ್ವೆ. ಬುಧ್ಧಿಗೇಡಿಗಳು".  ಅಷ್ಟರಲ್ಲೇ ಫುಟಪಾತ್ ಮೇಲೆ ಮಲಗಿದವನಿಗೆ ಕಾಲು ತಗಲಿತ್ತು. ಅವನಂದ , " ಬೋ.. ಮಗನೆ, ಕಣ್ಣು ಕಾಣಲ್ವಾ? ". ಇವನಂಗಿಯ ತೋಳುಗಳು ಮೇಲೇರಿದ್ದವು.
-1-
ಕಂಪ್ಯೂಟರ್ ಅವನಿಗೆ ಸವಾಲು ಹಾಕುತ್ತಿತ್ತು. ಇವನು ಉತ್ತರಿಸಿ ಬೀಗುತ್ತಿದ್ದ.ಇವನು ಅದಕ್ಕೆ ಪಾಟೀಸವಾಲು ಹಾಕುತ್ತಿದ್ದ . ಅದೂ ಉತ್ತರಿಸುತ್ತಿತ್ತು. ಹೀಗೆ ಬರೀ ಉತ್ತರ - ಪ್ರಶ್ನೆಗಳಲ್ಲಿ ದಿನ-ರಾತ್ರಿ ಕಳೆಯುತ್ತಿದ್ದವು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿತ್ತು. ಕಾರುಗಳು ಮನೆಯ ತುಂಬಿದವು. ಮಕ್ಕಳೂ ಕಂಪ್ಯೂಟರ್ ನ ಪ್ರಶ್ನೆಗಳಿಗೆ ಉತ್ತರಿಸಲಾರಂಭಿಸಿದವು  ಕೊನೆಗೊಂದು ದಿನ ಅವನು ಸತ್ತ. ಅವನ ಕಂಪ್ಯೂಟರ್ ಬೇರೆಯವರ ಜೊತೆ  ಪ್ರಶ್ನೋತ್ತರದಲ್ಲಿ ತೊಡಗಿತು, ಎಂದಿನಂತೆಯೇ.


Saturday, April 3, 2010 1 comments

ತುಮುಲ

ನನ್ನ ಮನಸಿನ ಕುದಿಯ ಕೇಳುವವರಾರು
ತುಂಬಿಹುದು ಜಗದಲ್ಲಿ ಆಧುನಿಕತೆಯ  ಕಾರು-ಬಾರು
ಒಲೆ ಮೇಲೆ ಇಟ್ಟಿರುವೆ ದುಬಾರಿ ಬೇಳೆಯ ಸಾರು
ಉಕ್ಕುವದರೊಳಗೆ ತೋರಿಸಲೆತ್ನಿಸುವೆ ನನ್ನ ಹೃದಯದ ಚೂರು.

ಅಂಗಿಯು ತುಂಬಿಹುದು ಹೊಗೆಯ ಕಮರು ಘಾಟು(ಗಂಡ)
ಕೇಳಿದರೆ ಕಣ್ಣಲ್ಲೇ ಚಾಟಿಯ ಏಟು.
ತಲೆಯ ಒಳಗೆಲ್ಲ ಬರೀ ಶೇರುಗಳ ರೇಟು
ರೂಮಿನಲಿ ಬಂದೊಡನೆ ಆರಿಸುತ ಲೈಟು.

ಮದಿರೆ ಮಾನಿನಿಯರ ಹಿಂದೆ ಓಡಿ ಓಡಿ(ಮಗ)
ವೇಗ ಸಾಕಾಗದೆಂದು ಕೊಂಡಿಹನು ಗಾಡಿ
ಹಿಂದೆ ಬರೆಸಿಹನು "ಸಾಧ್ಯವಾದರೆ ನನ್ನ ಹಿಡಿದು ನೋಡಿ"
ಮುಗುಳ್ನಕ್ಕು ಯಮನೆಂದ "ಹುಚ್ಚು ಖೋಡಿ".

ಪ್ರತಿಯೊಂದು ಮೆಸೇಜಿಗೂ ಕಣ್ಣಲ್ಲಿ ದೀವಳಿಗೆ(ಮಗಳು)
ರಾತ್ರಿಯಲಿ ಹೊರಟಿಹುದು ಪಿಸುಮಾತ ಮೆರವಣಿಗೆ
ಮುಖವು ಆಗಿಹುದು ಸುಣ್ಣ ಬಣ್ಣದ ಮಳಿಗೆ
ಬೆಂಬಲಕ್ಕೆ ನಿಂತಿಹುದು ಐಪಿಲ್ಲು ಗುಳಿಗೆ.

ಮುಪ್ಪಲ್ಲ, ಯೌವನವಲ್ಲ, ನಡುವಿನ ಭೀತಿ
ಮತಿಯಲ್ಲಿ ಎದ್ದಿಹುದು ಆಲೋಚನೆಗಳ ಕ್ರಾಂತಿ
ವೈದ್ಯರೆನ್ನುವರು ಇದಕೆ ಮನಸಿನ ಭ್ರಾಂತಿ
ಗಗನ ಕುಸುಮವು ಇಂದು ನೆಮ್ಮದಿ, ಶಾಂತಿ

ಸ್ಫೂರ್ತಿ: ವಿಶ್ವೇಶ್ವರ ಭಟ್ಟರವರ "ನೂರೆಂಟು ಮಾತು" ಅಂಕಣ (ವಿಜಯ ಕರ್ನಾಟಕ ೦೧-೦೪-೨೦೧೦)  
Wednesday, March 31, 2010 0 comments

ಕಳ್ಳೆಕಾಯಿ, ಕಳ್ಳೆಕಾಯಿ

"ಕಳ್ಳೆಕಾಯಿ, ಕಳ್ಳೆಕಾಯಿ, ಬುಧ್ಧಿಜೀವಿ ಕಳ್ಳೆಕಾಯಿ, ಎಲ್ಲಾ ಬುಧ್ಧಿಜೀವಿಗಳು ಇದೇ ಕಳ್ಳೆಕಾಯಿ ತಿನ್ನೋದು.ಯಾರಿಗ ಬೇಕು? " 
"ಜಬ್ ಮಿಯಾ ಬೀವಿ ಹೋ ರಾಜಿ , ತೋ ಕ್ಯಾ ಕರೇಗಾ ಖಾಜಿ !"
ಈ ಶೀರ್ಷಿಕೆಗೆ ೨೦೧೦ ರ ಉತ್ತಮ ಶೀರ್ಷಿಕೆ ಬಂದರೆ ಅದಕ್ಕೆ ಅಚ್ಚರಿ ಪಡಬೇಡಿ. ಇದು ನಮ್ಮ ನೆಚ್ಚಿನ ಸಿಂಹರ ಲೇಖನ( ೨೭/೦೩/೨೦೧೦)ದ ಶೀರ್ಷಿಕೆ.
ಸಿಂಹಕ್ಕೆ ಮತ್ತೊಂದು ಗರಿ(!). ಆದರೆ ಅವರ ಲೇಖನವನ್ನು ಜೀರ್ಣಿಸಿಕೊಳ್ಳೋದು  ಸ್ವಲ್ಪ ಕಷ್ಟ.ಜೀರ್ಣಿಸಿಕೊಂಡರೆ ಹೊಟ್ಟೆ ಕೆಡುತ್ತೆ!. 
                ಜಗತ್ತಿಗೆ ಸಂಸ್ಕೃತಿ ಮತ್ತು ಸಂಭಂಧದ ಪರಿಕಲ್ಪನೆ ಕೊಟ್ಟಿದ್ದೇ ನಾವು.ಅಸಂಭದ್ದ  ಮತ್ತು  ಅಶ್ಲೀಲತೆಯನ್ನು ಮೈಗೂಡಿಸಿಕೊಂಡ ಎಷ್ಟೋ ನಾಗರಿಕತೆಗಳು ಮಣ್ಣಾಗಿದ್ದನ್ನು  ನಾವು ನೋಡಬಹುದು. ಇಷ್ಟಕ್ಕೂ ನಮ್ಮ ಸಿಂಹ ಏನು ಹೇಳ್ತಾರೆ? " ಹುಡುಗ ಹುಡುಗಿಯರು ತಮ್ಮ ಗುರಿ ಸಾಧನೆಗೆ ಬೇಗ ಮದುವೆಯಾಗೋಲ್ಲ. ಕೆಲವು ಜನ ಪಟ್ಟಣಕ್ಕೆ  ಅಥವಾ ದೂರದ ಊರಿಗೆ ಓದಲು ಹೋಗುತ್ತಾರೆ. ಹಾಸ್ಟೆಲ್ಲುಗಳಲ್ಲಿ ಉಳಿಯುತ್ತಾರೆ. ಹುಡುಗ ಹುಡುಗಿಯರ ಮಧ್ಯೆ ಸ್ನೇಹ ಬೆಳೆಯುತ್ತದೆ.ದೈಹಿಕ ಕಾಮನೆಗಳು ಅವರ ಸ್ನೇಹಡ ತಳಹದಿ ಮೇಲೆ ಮೊಳಕೆಯೊಡೆಯುತ್ತವೆ. ಮಾಗಿದ ವಯಸ್ಸು ಅದಕ್ಕೆ ಕಾರಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಅದನ್ನು ಒಪ್ಪಿಕೊಳ್ಳುವ  ಅನಿವಾರ್ಯತೆ ಇಂದು ನಮ್ಮ ಮುಂದಿದೆ". 
ಡಾರ್ವಿನ್ ಥಿಯರಿಯಷ್ಟು ಕರಾರುವಾಕ್. ಅಲ್ಲ ಸಿಂಹ ಅವರೇ, ಹೀಗಂತ ಇಡೀ ಯುವಸಮೂಹವನ್ನು ತಪ್ಪು ದಾರಿಗೆಳೆಯುವದೆ? ಯಾವುದೇ ಅಡ್ಡಿಗಳಿಲ್ಲದೆ ಯುವ ಸಮೂಹ ಹಗ್ಗ ಬಿಚ್ಚಿದ ಎಮ್ಮೆ ಕೋಣಗಳಾದಾವು.ಭಾವನೆಗಳನ್ನು,ನೋವು ನಲಿವುಗಳನ್ನು ಹಂಚಿಕೊಂದಲ್ಲಿ ಅದನ್ನು ಸ್ನೇಹವೆಂದು ಹೇಳಬಹುದು. ಒಂದು ಹೆಜ್ಜೆ ಮುಂದೆ ಹೋದಲ್ಲಿ ಅದನ್ನು ಪ್ರೀತಿ ಎನ್ನಬಹುದು. ಇನ್ನೂ ಒಂದು ಹೆಜ್ಜೆ ಇಟ್ಟಲ್ಲಿ ಅದನ್ನು ಮದುವೆ ಎನ್ನಬಹುದು. ಈ ಎರಡನೇ ಮತ್ತು ಮೂರನೆ ಹೆಜ್ಜೆಗಳ ನಡುವೆ ದಾರಿ ತಪ್ಪಿದರೆ ಅದನ್ನು ಎಡವಟ್ಟು ಎನ್ನಬಹುದು,ಅಥವಾ ವಿವಾಹಪೂರ್ವ ಸಂಭಂಧ ಎನ್ನಬಹುದು. ಅದನ್ನೇ ನಮ್ಮ ಸರಕಾರ ಈಗ ಸಮ್ಮತಿಸಿದೆ. ಈ ಸಂಭಂಧಕ್ಕೆ ನಮ್ಮ ಶಬ್ದಕೋಶದಲ್ಲಿ ಉತ್ತಮ ಶಬ್ದಗಳೇ ಇಲ್ಲ. 
ಅಲ್ಲಾ ಸ್ವಾಮಿ, ಈಗಲೇ ನಾವು ಈ ವಿಭಕ್ತ ಕುಟುಂಬಗಳಿಂದ ಅನುಭವಿಸುತ್ತಿರೋದೆ ಸಾಕು. ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆ, ಮಾವ ಮುಂತಾದ ಸಂಭಂಧಗಳೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ಈ ಅವ್ಯಕ್ತ ಕುಟುಂಬಗಳಿಂದ ಆಗುವ ಸಂಸ್ಕೃತಿ ನಾಶಕ್ಕೆ ಹೊಣೆ ಯಾರು? ಎಲ್ಲಾರು ಮೂಳೆ  ಕಡೀತಾರಾ? ಇನ್ಮೇಲೆ ಕಡಿದವರೆಲ್ಲ ಮೂಳೆ ಹಾರ  ಮಾಡ್ಕೊಂಡು ಸಂಭ್ರಮಿಸಬೇಕು. ಜಗತ್ತಿನ ಜನ ನಮ್ಮ ಸಂಸ್ಕೃತಿಯ ಅವನತಿಯನ್ನು ನೋಡಿ ನಗಬೇಕು. ಇದೇ ಅಲ್ವೇ ಅಭಿವೃದ್ಧಿಯ ಸಂಕೇತ. ಅವ್ರು ಮಾಡ್ತಾರೆ, ನಾವೂ ಮಾಡೋಣ. ಏನು ಹುಚ್ಚು ಸ್ವಾಮಿ. ಶಿಕ್ಷಣದಲ್ಲಿ ನೈತಿಕತೆ, ಮಾನವೀಯತೆ, ಸಂಸ್ಕೃತಿ,ಮತ್ತು ಅವಿಭಕ್ತ ಕುಟುಂಬಗಳಿಂದ ಆಗುತ್ತಿದ್ದ  ಉಪಯೋಗಗಳನ್ನು ಅಳವಡಿಸಿ ಮತ್ತೆ ಸಂಸ್ಕೃತಿ ಸೌಧವನ್ನು ಕಟ್ಟಬೇಕೆ ಹೊರತು ಇಂತಹ ಹೊಲಸು ಕಾನೂನುಗಳನ್ನಲ್ಲ .www.divorcerate.org ರವರ ಸರ್ವೇ ಪ್ರಕಾರ ಅಮೇರಿಕದಲ್ಲಿ ಶೇ ೫೦% ವಿವಾಹಗಳು ಮುರಿಯುತ್ತವೆ. ಆದರೆ ನಮ್ಮಲ್ಲಿ ಕೇವಲ ಶೇ.೧%. ಇದೂ ಕೂಡ ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗಿದ್ದು. ನಮ್ಮ ಮನೆ ನಮ್ಮ ಮೊದಲ ಪಾಠಶಾಲೆ. ಅಲ್ಲಿಂದ ನಾವು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಪ್ರಯತ್ನ ಮಾಡೋಣ. 
ಒಬ್ಬ ಪತ್ರಕರ್ತ ಬರೀ ಅಂಕಿ ಅಂಶ, ಉತ್ತಮ ಶಬ್ದಜೋಡಣೆಯಿಂದ ಲೇಖನ ಬರೆದಲ್ಲಿ ಆಗುವ ಅನಾಹುತಗಳಿವು. ಬರೀ ರೋಚಕತೆಗೆ ಆಯುಷ್ಯ ಅಲ್ಪ ಮತ್ತು ಅಪಾಯಕಾರಿ. ಪ್ರತಿಯೊಂದು ಲೇಖನ, ಕವಿತೆ, ಕತೆ, ಕಾದಂಬರಿ ಹಿಂದೆ ಸಂವೇದನೆ ಮುಖ್ಯ. ಒಬ್ಬ ಲೇಖಕ ಓದುಗನ ಅಭಿರುಚಿಯನ್ನು  ಉತ್ತಮವಾಗಿಸಬೇಕು. ಇಲ್ಲವಾದಲ್ಲಿ ಅವನಿಗೂ ಕಸಬ್ ಗೂ ಯಾವುದೇ ವ್ಯತ್ಯಾಸವಿಲ್ಲ. ಕಸಬ್ ಕೇವಲ ಬೆರಳೆಣಿಕೆಯಷ್ಟು ಜನರನ್ನು ದೈಹಿಕವಾಗಿ  ಕೊಂದ. ಇವರೋ ಇಡೀ ಒಂದು ಸಮಾಜವನ್ನು ಹೊಲಸು ಮಾಡುತ್ತಾರೆ. ವಿಚಾರವಾದಿಗಳೇ, ಲೇಖಕರೇ, ಪತ್ರಕರ್ತರೇ, ಬುಧ್ಧಿಜೀವಿಗಳೇ ಕಡ್ಲೇಕಾಯಿ ತಿಂದಿದ್ದು ಸಾಕು. ನೀವೆನಂತೀರಿ? 

Saturday, March 27, 2010 0 comments

ಸ್ಪೂರ್ತಿ

ಮೂಳೆ ತೊಗಲಿನ ತಡಿಕೆ, ಮೇಲೆ ಅಂಗಿಯ ಹೊದಿಕೆ,
ಸಿಂಹಿಣಿಯು ನಾಚಿತು ನಿನ್ನ ಕಟಿಯ ಕಂಡು.

ಗಾಂಡೀವ ಮರೆಯಾಗಿ ನಿನ್ನ ಹುಬ್ಬುಗಳಾಗಿ,
ಓಲಂಪಿಕ್    ರಿಂಗುಗಳು ಕಿವಿಗೆ ಲೋಲಾಕುಗಳಾಗಿ ,
ತಲೆ  ಬಾಗಿ ನಿಂತಿಹಳು ಶಿಲೆಯ  ಬಾಲೆ.

ನಾಗರದ ಮೊಟ್ಟೆಯಲಿ ವೃಶ್ಚಿಕದ  ಮರಿಯಿಂದು.
ಚೂಡಿ ,ಜೀನ್ಸು, ನೈಟಿಗಳೆಲ್ಲ ಒಣಮೈಯ ತಬ್ಬಿರಲು,
ಶ್ರೀ ಕೃಷ್ಣನೂ ಅಸಹಾಯ ಇಂದಿನ ದ್ರೌಪದಿಗೆ.

ಕೊನೆಯ ಮಾತೊಂದ ಹೇಳುವದ  ಮರೆತೆ,
ಕಡಿಮೆಯಾಗಿರಲು ಇಂದು  ಸ್ಪೂರ್ತಿಯ ಒರತೆ,
ಎಲ್ಲಿ ಹುಟ್ಟೀತು ರಸಮಯ ಕವಿತೆ?
Tuesday, March 16, 2010 2 comments

ಒಂದು ಸಂವಾದ

ಮಲಗಿದ್ದೆ ನಾನಂದು, ಛಕ್ಕನೆ ಕುಳಿತೆದ್ದೆ,
ಬೆಚ್ಚಿದೆ ಪಕ್ಕದಲಿ ಕುಳಿತವನ ಕಂಡು.
"ಬೇರೆ ಯಾರೂ ಅಲ್ಲ, ನಿನ್ನದೇ ಆತ್ಮ,
ಬಂದಿಹೆನು ನಾ ನಿನ್ನ ಜೊತೆ ಮಾತನಾಡಲು."
ಬೆದರಿದ ಹರಿಣಿಯಂತೆ, ತೊದಲಿ ನಾ ಉಸುರಿದೆ,
"ಹೇಳು, ನಿನ್ನ ಮಾತು ಕೇಳಲು ನನಗೆ ಭಯವಿಲ್ಲ".
ಅದಕ್ಕೆ ಉತ್ತರವಾಗಿ ನನ್ನಾತ್ಮ ಹೀಗೆಂದು ಉತ್ತರಿಸೆ,
"ಹುಟ್ಟಿನಿಂದಲೇ  ನಾನು ನಿನ್ನೊಳಗೆ ಅಡಗಿಹೆನು,
ನಿನ್ನ ಸಾಧನೆಗಳಿಗೆಲ್ಲ ಪ್ರೇರಕನು ನಾನೇ.
ಬಳಪದಲಿರುವ  ಬೆಳಕು ತೋರಿಸಿದವ ನಾನು,
ಬಾಳ ಬಳಪವ ತೇಯ್ದವನು ನಾ.
ನಿನ್ನದೆನುವದೇನುಂಟು ? ನಿನ್ನೆದೆಯಲೇನುಂಟು?
ಚೈತನ್ಯನು ನಾ ನಿನಗೆ."
ನಾನಲ್ಲ ಮನಮೋಹನ, ಹೆದುರುವೆನೆ ಸುಶ್ಮಾತ್ಮಕೆ,
 ಗರ್ವದಿ  ಉತ್ತರಿಸಿದೆ,
"ಹೌದು. ಎಲ್ಲವು ನಿನ್ನದೇ. ನನ್ನದೇನೂ ಇಲ್ಲ.
ಈ ಕ್ಷಣವೇ ನಿಲಿಸುವೆನು ಈ ನನ್ನ ಉಸಿರ,
ತೆಗೆದುಕೋ ಈ ನನ್ನ ಬಿರುದು, ಆ ಕಂಠಿಸರ".

Wednesday, March 10, 2010 2 comments

ಸ್ವಾತಿಮುತ್ತು

ಬಾನಿನ ಕಣ್ಣಂಚಿನಿಂದ ಹೊರಬಂದ ಆ ಹನಿಯ ಅಂಚಿಗೆ,
ಕೋಲ್ಮಿಂಚಿನ ಮಿಂಚು  ತಾಗಿ
ಸಂಚು ಕೊಂಚ ಕೊಂಚ ಕಂಡಿತೆನಗೆ .
ಆ ಹನಿಗೆ, ಲಂಚ ಕೊಟ್ಟು ಕೇಳಿದಾಗ, ಮನದ ಭಾವ ಬುಗ್ಗೆಯಲ್ಲಿ  ಸಂಚರಿಸುತ್ತಾ ...
ಗೊಣಗಿತ್ತು, ಆಗಬೇಕೆಂಬುದು ಚಿಪ್ಪಿನಲ್ಲಿ ಸ್ವಾತಿಮುತ್ತು.
                                                ಇಂದ,
                                                         ಪ್ರೀತಿ.
Thursday, March 4, 2010 0 comments

ಪ್ರಕೃತಿಮಾತೆಗೊಂದು ಪತ್ರ

ಯುಗಾದಿಯ  ಸಂಧರ್ಭದಲ್ಲಿ  ಪ್ರಕೃತಿಮಾತೆಗೊಂದು ಪತ್ರ
ಹೊಸತು ಉಡುವ ಸಡಗರದಲ್ಲಿ  ಹಳೆಯದನ್ನು ಮರೆಯದಿರು,
ವಸನ ಹೊಸದಾದರೇನು ನೀನು ಹಳತು.

ಹುಟ್ಟುಹಬ್ಬವು ಇದು ನಿನಗೆ,
ಮರುಜನ್ಮವಂತೂ ಅಲ್ಲ,
ಇರುವ ಪಯಣವ ಮುಗಿಸು,
ಹೊಸತು ಬೇಕೇನೀಗ?

ಕಲ್ಲು ಮುಳ್ಳುಗಳ ಸಂತೆ ದಾರಿಯಲಿ ತುಂಬಿರಲು ,
ನಗೆಯು ನಗುತಿರಲಿ ನಿನ್ನ ತುಟಿಯ ಅಂಚಲ್ಲಿ,
ಗಾಯವು ಮಾಯುತಿರಲು , ನೋವ ಮರೆಯಿನ್ನು .
ಸಾಗುತಿರಲಿ  ಈ ನಿನ್ನ ಅನಂತ ಪಯಣ.

ನಿನ್ನ ದಾರಿಯಲ್ಲೇ ಬರುವ ಸಹಯಾತ್ರಿಕನು ನಾನು,
ಮುನ್ನಡೆಸು ನನ್ನನು ನನ್ನ ಗಮ್ಯದ ಕಡೆಗೆ.
ಜೀವನಾಧಾರವಾದ ಈ ನಿನ್ನ ಮಮಕಾರ
ಮರೆಯೆನು ನಾನು ಈ  ಮಹದುಪಕಾರ.

ಕೋಗಿಲೆಯ ಗಾನದಲಿ, ಮಾವಿನ ತಂಪಿನಲಿ,
ಆಚರಿಸು ಈ ನಿನ್ನ ಜನುಮದಿನ.
ಪ್ರೀತಿ ಪ್ರೇಮವ ಬೆಳೆಸಿ, ಮನುಕುಲವು ಇರುವಂತೆ ,
ಹರಸು ಈ ನಿನ್ನ ಕುಡಿಗಳನ್ನ.

Wednesday, March 3, 2010 0 comments

ನಮ್ಮ ಮೌನಕ್ಕೊಂದು ಧಿಕ್ಕಾರ.






"ಶಿವಮೊಗ್ಗದಲ್ಲಿ ಗಲಾಟೆ", "ಗದಗನಲ್ಲಿ ಪ್ರತಿಮೆಗೆ ಚಪ್ಪಲಿ ಹಾರ". "ಪತ್ರಿಕಾ ಕಚೇರಿಗೆ ಬೆಂಕಿ". ಇವೆಲ್ಲಾ ನಮ್ಮ ಪತ್ರಿಕೆಗಳ  ತಲೆಬರಹಗಳು. ಪಟ್ಟನೆ ಓದಲು ತೊಡಗುತ್ತೇವೆ. ಓದಿದ ನಂತರ ಹೀಗಾಗಬಾರದಿತ್ತು ಎಂದು ಲೊಚಗುಡುತ್ತಾ ಮುಂದಿನ ಪುಟಕ್ಕೆ ಕಣ್ಣು  ಹಾಯಿಸುತ್ತೇವೆ. ಇಷ್ಟಕ್ಕೂ , ನಡೆದಿದ್ದಾದರೂ  ಏನು? ಎಂಬ ಕುತೂಹಲವೂ ನಮ್ಮಲ್ಲಿ ಕೆರಳುವದಿಲ್ಲ. ಅದು ಹಾಗಿರಲಿ, ಅಷ್ಟೊಂದು ಭಯಾನಕ  ಗಲಾಟೆಗೆ ಕಾರಣವಾದ ಅಂಶಗಳ ಬಗ್ಗೆ ಗಮನ ಹರಿಸೋಣ. ತಸ್ಲಿಮಾ ನಸ್ರೀನ್ ಒಬ್ಬ ಬಾಂಗ್ಲಾ ದೇಶದ ಲೇಖಕಿ. ಅವಳು ತನ್ನ "ಲಜ್ಜಾ" ಕಾದಂಬರಿಯಲ್ಲಿ, ೧೯೯೨ ರಲ್ಲಿ ನಡೆದ ಬಾಬ್ರಿ ಮಸೀದಿ   ಧ್ವ೦ಸವು ತನ್ನ ನಾಡಿನಲ್ಲಿನ  ಹಿಂದೂಗಳ  ಮೇಲೆ ಆದ ಪರಿಣಾಮ, ಪ್ರತಿಕೂಲಗಳ ಬಗ್ಗೆ, ಅಂಕಿ ಅಂಶಗಳೊಂದಿಗೆ, ಒಂದು ಹಿಂದೂ ಕುಟುಂಬವನ್ನು ಕೇಂದ್ರಿಕೃತವಾಗಿಟ್ಟುಕೊಂಡು ಕತೆ ನೇಯುವದರಲ್ಲಿ ಯಶಸ್ವಿಯಾಗಿದ್ದಾಳೆ. ಅಂಥಹ ವಿವಾದಾತ್ಮಕ ಲೇಖಕಿಯ ಲೇಖನಗಳನ್ನು ಪ್ರಕಟಿಸುವ ದರ್ದು ಕನ್ನಡಪ್ರಭ ಪತ್ರಿಕೆಗೆ ಏನಿತ್ತೋ? ಒಂದು ವಿವಾದವನ್ನು, ಮತೀಯ ಕಲಹಗಳನ್ನು, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಲೇಖನಗಳು ಸಾರ್ವಜನಿಕವಾಗಿ ಪ್ರಕಟವಾದಲ್ಲಿ, ಅದು ಒಂದು ಜನಾಂಗ, ಅಥವಾ ಒಂದು ಕೋಮಿನಲ್ಲಿ ಕೆಚ್ಚು ಹುಟ್ಟಿಸುವದರಲ್ಲಿ ಸಂದೇಹವಿಲ್ಲ. ಅಲ್ಲದೇ, ಇನ್ನೊಂದು ಜನಾಂಗದಲ್ಲಿ ಅಹಂಕಾರವನ್ನು ತುಂಬಬಲ್ಲುದು. ಇಂತಹ ಅವಿವೇಕಗಳಿಂದ ನಾವು ದುರ್ಬಲವಾಗುತ್ತೇವೆ. ನಾಡು ಅಶಾಂತಿ, ಭೀತಿ ಚೀತ್ಕಾರಗಳಿಂದ ತುಂಬಿಹೋಗುತ್ತದೆ.  ಎಲ್ಲ ಮತಗಳನ್ನು ಗೌರವಿಸುವ ನಮ್ಮ ಸಹಿಷ್ಣುತೆ ಕಡಿಮೆಯಾಗುತ್ತದೆ. ಪತ್ರಿಕೆಗಳ ಈ  ದುಸ್ಸಾಹಸ ಕ್ಷಮಿಸಲಾಗದು. ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿದ ಪತ್ರಿಕೆಗಳಿಗೊಂದು ಧಿಕ್ಕಾರವಿರಲಿ.
ನಮ್ಮ ಜನಗಳಿಗೊಂದು ಒಂದು ಸಣ್ಣ ಕಾರಣವೂ ಸಾಕು. ಸ್ವಲ್ಪವೂ ವಿವೇಚನೆಯಿಲ್ಲದೆ, ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುತ್ತಾರೆ, ನಾವೆಲ್ಲಾ ಇಂದು ತುಂಬಾ ದುಬಾರಿ ಜೀವನ ನಡೆಸಲು ಇದೂ ಕಾರಣ. ನಮ್ಮ ತೆರಿಗೆಯ ಒಂದು ಪಾಲು ರಾಜಕಾರಣಿಗಳು ನುಂಗಿದರೂ, ಅಲ್ಪ ಅಂಶ ಸಾರ್ವಜನಿಕ ಆಸ್ತಿಗಳಿಗೆ ಖರ್ಚಾಗುತ್ತದೆ. ಈ ತರಹದ ವಿಧ್ವಂಸಕ ಕೃತ್ಯಗಳಿಂದ ನಾವು ಸಾಧಿಸುವದಾದರೂ ಏನು? ಯಾವುದೋ ದೇಶದ ಒಬ್ಬ ಲೇಖಕಿ, ಅವಳ ಒಂದು ವಿವಾದಾತ್ಮಕ ಲೇಖನ, ಅದನ್ನು ಪ್ರಕಟಿಸುವ ಅವಿವೇಕಿ ಪತ್ರಿಕೆ. ಈ ಕಾರಣಕ್ಕೆ ನಾವು, ನಮ್ಮ ಬಸ್ಸುಗಳನ್ನು, ದಾರಿದೀಪಗಳನ್ನು ಬಲಿಕೊದಬೇಕೆ. ಸಾರ್ವಜನಿಕ ಆಸ್ತಿ, ನಮ್ಮ ಆಸ್ತಿ. ಹಾಗಂದ ಮಾತ್ರಕ್ಕೆ ಅವುಗಳನ್ನು ನಾಶ ಮಾಡಲು ನಮಗೆ ಹಕ್ಕಿದೆಯೇ? ನಮ್ಮ ಮಗ ಅಥವಾ ಮಗಳು ಎಂದು ಕೊಲ್ಲಲು ನಮಗೆ ಹಕ್ಕಿದೆಯೇ? ಇದು ನಮ್ಮ  ನೈತಿಕತೆಯನ್ನೇ ಪ್ರಶ್ನಿಸುತ್ತದೆ. ಇಡೀ ವಿಶ್ವಕ್ಕೆ ಸಾಮರಸ್ಯವನ್ನು ಹೇಳಿಕೊಟ್ಟವರು ನಾವು. ಇಡೀ ಜಗತ್ತು, ಕರಿಯರು-ಬಿಳಿಯರು ಎಂದು ಹೊಡೆದಾಟ ನಡೆಸಿರುವಾಗ ನಾವು ಇಡೀ ವಿಶ್ವಕ್ಕೆ ಪಾಠ ಹೇಳುವದನ್ನು ಬಿಟ್ಟು ನಮ್ಮಲ್ಲೇ ಒಡಕು ತೋರಿಸುತ್ತೇವೆ. ನಾಚಿಕೆ ಇರಲಿ ನಮಗೆ. ನಮ್ಮ ಮೌನಕ್ಕೊಂದು ಧಿಕ್ಕಾರ.
Monday, March 1, 2010 0 comments

ಕದನ



ನಗೆಯೇ ನಿನ್ನಾಯುಧವು, ನಯನಗಳೇ ಅದಕಿಂಬು ,
ನನ್ನ ಬತ್ತಳಿಕೆಯಲಿ ಅವಕೆ ಉತ್ತರವಿಲ್ಲ.
ನಿನ್ನ ಬೆವರ ಘಮವು ನಶೆಯ ತಂದಿರಲು ,
ಶರಣಾದೆ ನಿನ್ನ ಪ್ರೇಮವ್ಯೂಹದಿ.

Saturday, February 27, 2010 0 comments

ಶಾರುಖ್ ಮತ್ತು ನಾವು.


ಶಾರುಖ್ ಮತ್ತು ನಾವು ಎಷ್ಟು ಆತ್ಮೀಯರಾಗಿದ್ದೇವೆಂದರೆ, ಅವನನ್ನು ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನಾವು ಅವನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ.  ಅವನ ಚಿತ್ರ, ಅವನ ನಟನೆ ಚೆನ್ನಾಗಿದ್ದಲ್ಲಿ ನಮ್ಮದೇ ವಿಜಯವೆಂಬಂತೆ ಸಂಭ್ರಮಿಸುತ್ತೇವೆ. ಚಿತ್ರ ತೋಪಾದಾಗ ಏನೋ ಕಳೆದುಕೊಂಡಂತೆ ಒಂದು ಕ್ಷಣ ಉದಾಸರಾಗುತ್ತೇವೆ.ಅವನ ಹಾಡುಗಳನ್ನು ನಮ್ಮ ಮೊಬೈಲಿನಲ್ಲಿ Ringtone ಮಾಡುತ್ತೇವೆ. ಹೌದು, ಅವನೊಬ್ಬ ಅಧ್ಭುತ ನಟ, ಕಲಾವಿದ, ಸಾಹಸಿ ಮತ್ತು ಕನಸುಗಾರ. ಅವನ Dreams Unlimited, Kolkata Knight Riders ನ ಮಾಲಿಕತ್ವ ಮತ್ತು Red chillies ಕಂಪನಿಗಳು ಅವನ ಕನಸುಗಳಿಗೆ ಸಾಕ್ಷಿ. ಅವುಗಳ ಯಶಸ್ಸು ಅವನ ಸಾಹಸ ಮತ್ತು ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ಹಲವಾರು ಪ್ರಶಸ್ತಿಗಳು ಅವನ ನಟನಾ ಕೌಶಲ್ಯಕ್ಕೆ ಮೆರುಗು ತಂದಿವೆ. ವೈಯಕ್ತಿಕವಾಗಿ ನಮಗೆ ಶಾರುಖ್ ಬಗ್ಗೆ ತುಂಬಾ ತಿಳಿದಿಲ್ಲವಾದರೂ, ಒಬ್ಬ ಅಸಾಮಾನ್ಯ ನಟನಾಗಿ ಅವನು ನಮ್ಮನ್ನು  ಅವನ ಅಭಿನಯಕ್ಕೆ ತಲೆದೂಗುವಂತೆ ಮಾಡಿದ್ದಾನೆ. 
ಅವನ ಖಾಸಗಿ ವಿಷಯವನ್ನೇ ನಾವು ಪರಿಗಣಿಸುವದಾದರೆ, ಶಾರುಖ್ ಯಾವತ್ತೂ ಒಬ್ಬ ಪರಿಣಿತ ರಾಜಕಾರಣಿಯಂತೆ ಗೋಚರಿಸುತ್ತಾನೆ. ಅವನು ಹಿಂದೆಯೂ  ಹಿಂದೂ ಮತ್ತು ಮುಸ್ಲಿಮರ ಮನಸನ್ನು ಸೆಳೆಯಲು ಪ್ರಯತ್ನಿಸಿದ್ದಾನೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅವನು ಗೌರಿಯನ್ನು ಮದುವೆಯಾಗಿದ್ದು.. ಅವಳನ್ನು ಮದುವೆಯಾಗಿ ಹಿಂದೂ -ಮುಸ್ಲಿಂ ಭಾವೈಕ್ಯತೆಯನ್ನು ಎಲ್ಲರ ಹೃದಯದಲ್ಲಿ ಅಂಕಿತ ಮಾಡಿದ್ದರೂ, ಗೌರಿ, ಗೌರಿಖಾನ್ ಆದದ್ದರ ಬಗ್ಗೆ ನಾವು ಮರೆತಿದ್ದೇವೆ.ಅವನ ಇತ್ತೀಚಿನ MY NAME IS KHAN ಚಿತ್ರವನ್ನೇ ಪರಿಗಣಿಸಿದಲ್ಲಿ ಅವನ ಈ ಮುಖ ತೋರುವದರಲ್ಲಿ ಸಂಶಯವಿಲ್ಲ. 

ಇಂತಹ ಶಾರುಖ್ ತನ್ನ ಸಾರ್ವಜನಿಕ ಹೇಳಿಕೆಗಳಿಂದ ನಮ್ಮ ಮನಸ್ಸನ್ನು ಘಾಸಿಗೊಳಿಸುವದು ಸರಿಯಲ್ಲ. ಒಂದೊಮ್ಮೆ ಶೋಯಬ್ ಮಲ್ಲಿಕ್, ಈಗ ಪಾಕಿಸ್ತಾನದ ಪರವಾದ ಹೇಳಿಕೆಗಳು ಅವನ ಅಭಿಮಾನಿಗಳಾದ ನಮಗೆ ಗಾಬರಿಗೊಳಿಸಿವೆ. ಕ್ರೀಡೆ, ಸಾಹಿತ್ಯ, ಕಲೆ, ವಿಜ್ಞಾನ,ತಂತ್ರಜ್ಞಾನ,ಇವುಗಳು ಆಯಾ ದೇಶಗಳ ಪ್ರತಿಬಿಂಬ. ಸ್ವದೇಶಾಭಿಮಾನವನ್ನು ಬದಿಗಿಟ್ಟು ಆಡುವ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಕ್ರೀಡೆ ನಮಗೆ ಬೇಡ. ಅವು ನಮ್ಮ ರಾಷ್ಟ್ರದ ಹಿತಕ್ಕೆ ಮುಳ್ಳುಗಳು. 

ಇಂತಹ ಶಾರುಖ್ಗೆ  ನಮ್ಮ ಪ್ರತಾಪಸಿಂಹ ತುಂಬಾ ಮೊನಚಾಗಿ,ಅರ್ಥಬಧ್ಧ್ದವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟೋ ದಿನಗಳ ನಂತರ ಸಿಂಹರ ಒಂದು ಉತ್ತಮ ಲೇಖನ ('ಬೆತ್ತಲೆ ಜಗತ್ತು' , ವಿಜಯ ಕರ್ನಾಟಕ ದಿ.೨೭-೦೨-೨೦೧೦) ಓದಿದ ಅನುಭವ ನನಗಾಯಿತು. ಸಿಂಹರ ಪ್ರಶ್ನೆಗಳು ಯಾವುದೇ ಒಬ್ಬ ಭಾರತೀಯನು ನಮ್ಮ ಶತ್ರುರಾಷ್ಟ್ರಗಳನ್ನು ಬೆಂಬಲಿಸಲಾರದಂತೆ ಎಚ್ಚರಿಸುತ್ತವೆ.ಯಾರೋ ಹೇಳಿದ ನೆನಪು, "ಎಲ್ಲ ಮುಸ್ಲಿಮರೆಲ್ಲ ಉಗ್ರರಲ್ಲ, ಆದರೆ ಎಲ್ಲ್ಲ ಉಗ್ರರು ಮುಸ್ಲಿಮರು, ಇದು ಕಾಕತಾಳೀಯ". ಕೊನೆಯದಾಗಿ, ಶಾರುಖ್ ಇದು ಸರಿಯೇ? 

"The Brother hood of Islam is not the universal brotherhood of a man. It is the brotherhood of muslims for muslims only"---Dr.B.R.Ambedkar (Referred By Mr.PratapSimha in his article).

* ಸಿಂಹರ ಈ ಲೇಖನ Pdf ರೂಪದಲ್ಲಿ ಲಭ್ಯವಿದ್ದು, ಓದಲು ಇಚ್ಚಿಸುವವರು download ಮಾಡಿಕೊಳ್ಳಬಹುದು. 
Download Link:http://gururaj1234.pbworks.com

Friday, February 26, 2010 1 comments

ಜಾಲ

ಮಲಿನ ಕಳೆಯುವ ಮೀನಿನ ಹೆಜ್ಜೆ ಅಳಿಸೋ ನೀರು,
ಕಾಯುವದು ಜೀವವ, ಜಟಿಲಗೊಳಿಸಿ ಭಕ್ಷ್ಯ.
ಮುಸುಕಾಗಿ ಮಸುಕು ಮಾಡುವ ನೀರಿನ ಪರಿಯ
ಅರಿವ ಜಾಣರು ಉಂಟೆ?
ಉಸಿರ ಕೊಡುವ ಮನಸಿನ ಭಾವನೆ ಬೆಳಗಿಸೋ ದೇಹ,
ಚಂಚಲಗೊಳಿಸಿ ಮನವ, ತಪ್ಪಿಸುವದು ದಿಕ್ಕ.
ಮುಸುಕಾಗಿ ಮಸುಕು ಮಾಡುವ ದೇಹದ ಪರಿಯ
ಅರಿವ ಜಾಣರು ಉಂಟೆ?
ಉಬ್ಬು ತಗ್ಗುಗಳ ಹಿಂದೆ ಮೀನಿನ ಹೆಜ್ಜೆ.
0 comments

ಮೊದಲ ಓದುಗ

ಯಾರದೋ ಕಾಮಕ್ಕೆ ಜಾರಿಣಿಯ ದೇಹವು ಬೇಕು
ಪಾಪವೋ? ಪುಣ್ಯವೋ?
ಹೆರುವ ಹಾಗಿಲ್ಲ. ಹೊರುವ ಹಾಗಿಲ್ಲ.
ಮತ್ತ್ಯಾರದೋ ಲೇಖನಿಯ ಚಪಲಕ್ಕೆ
ಮೊದಲ ಓದುಗ ನಾನು
ಧರ್ಮವೋ? ಕರ್ಮವೋ?
ಹೆರುವ ಹಾಗಿಲ್ಲ, ಹೊರುವ ಹಾಗಿಲ್ಲ.
Tuesday, February 23, 2010 1 comments

ಮಾಧ್ಯಮ ಮತ್ತು ನಾವು.

ಮಾಧ್ಯಮಗಳು ಒಂದು ಸಮಾಜದ ಅವಿಭಾಜ್ಯ ಅಂಗ,ಪ್ರತಿಬಿಂಬ ಕೂಡ ಹೌದು. ಮಾಧ್ಯಮದ ಅಗತ್ಯತೆ, ಅನಿವಾರ್ಯತೆಗಳನ್ನ ನಾವು ವಿಶ್ಲೇಷಣೆಗೆ ಒಳಪಡಿಸಬೇಕಾದ ಪರಿಸ್ಥಿತಿ ಒದಗಿಬಂದಿದ್ದು ನಾಚಿಕೆಗೇಡಿನ ಸಂಗತಿ.
ನಾವು ಶಾಲೆಯಲ್ಲಿದ್ದಾಗ ಪ್ರಾರ್ಥನೆಯ ನಂತರ ಅಂದಿನ ದಿನಪತ್ರಿಕೆ ಓದುವ ಪರಿಪಾಠವಿತ್ತು. ಇಂದಿನ ದಿನಗಳಲ್ಲಿ ಅದನ್ನು ಕೆಲವು(?) ಶಾಲೆಗಳಲ್ಲಿ ನಾವು ಕಾಣಬಹುದು. ಆದರೆ ಇದರ ಔಚಿತ್ಯದ ಬಗ್ಗೆ ಪ್ರಶ್ನಿಸಬೇಕಾಗಿ ಬಂದಿದೆ. ನಮ್ಮ ಮನೆಗಳಲ್ಲಿ ನಮ್ಮ ಹಿರಿಯರು ದಿನಪತ್ರಿಕೆ ಓದಲು ಪುಸಲಾಯಿಸುತ್ತಿದ್ದರು. ಪತ್ರಿಕೆಗಳು ಅಂದರೆ ಅವರಿಗೆ ಶ್ರೇಷ್ಠವಾಗಿ ಕಾಣುತ್ತಿದ್ದವು. ಆದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಹೇಳಲು ನಮಗೆ ಸಾಧ್ಯವಿಲ್ಲ.
ಯಾವುದೇ ಒಂದು ಟೀವಿ (ಠೀವಿ) ಚಾನೆಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ನಾವು ಒಟ್ಟಿಗೆ ಕುಳಿತು ವೀಕ್ಷಿಸುವಹಾಗಿಲ್ಲ.ಒಂದು ದಿನಪತ್ರಿಕೆಯನ್ನು ಮನೆ ಮಂದಿಯೆಲ್ಲ ಓದುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಕಿರಿಯರಿಗೆ ಪತ್ರಿಕೆ ಓದು ಅಂತ ಹೇಳುವ ಹಾಗಿಲ್ಲ. ಯಾವುದೇ ಪತ್ರಿಕೆಯನ್ನು ತಿರುವಿ ನೋಡಿದರೂ ಅಲ್ಲಿ ನಮಗೆ ಬೇಕಾದ ಸರಕಿಗಿಂತ ಬೇಡವಾದ, ಅನವಶ್ಯಕವಾದ ಸುದ್ದಿಯನ್ನು ನಾವು ಕಾಣಬಹುದು. ಗಾಸಿಪ್ಪುಗಳು ನಮ್ಮ ಮಾಧ್ಯಮಗಳ ಅವಿಭಾಜ್ಯ ಅಂಗವಾಗಿದ್ದು ಬೇಸರದ ಸಂಗತಿ. ಕಂಗನಾ ಮತ್ತು ದಿನೋ ರವರ ಮುತ್ತಿನ ಪ್ರಸಂಗ, ತಿವಾರಿಯ ಪ್ರಣಯ ಚೇಷ್ಟೆಗಳಂತಹ ಸುದ್ದಿಗಳನ್ನೂ ರೋಚಕವಾಗಿ ಓದುಗರಿಗೆ ಉಣಬದಿಸುವದು ಸರಿಯೇ? ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳನ್ನು, ಅವರ ಕೆಸರಾಟವನ್ನುರೋಚಕ ಸಂಗತಿಯನ್ನಾಗಿಸುವದು ಯಾವ ಕ್ರಮ?
ಇಷ್ಟೆಲ್ಲಾ ನಮ್ಮ ಕಣ್ಮುಂದೆ ನಡೆಯುತ್ತಿದ್ದರೂ ನಾವ್ಯಾಕೆ ನಮ್ಮ ನರಗಳು ಸತ್ತಂತೆ , ಕಣ್ಮುಚ್ಚಿ ಬದುಕುತ್ತಿದ್ದೇವೆ? ನಮ್ಮಿಂದ ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇ? ದಾರಿ ಯಾವುದಯ್ಯ?
ದಾರಿ ಹುಡುಕುತ್ತ ಹೊರಟರೆ ನುಉರಾರು ದಾರಿಗಳು ಕಂಡಾವು. ಕೆಲವು ಪ್ರಯತ್ನಗಳನ್ನು ನಾವು ಮಾಡಬಹುದು.ನನ್ನವಿಚಾರಧಾರೆ ತಪ್ಪಾಗಿರಲೂಬಹುದು.
೧) ಪತ್ರಿಕೆಗಳನ್ನು ಓದಿದ ಮೇಲೆ ಅವುಗಳಲ್ಲಿರುವ ಅನವಶ್ಯಕ ಸುದ್ದಿಗಳನ್ನು ಗುರುತಿಸಬೇಕು. ನಂತರ ಅವುಗಳ ಬಗ್ಗೆ ನಿಮ್ಮ ವಿಚಾರವನ್ನು ಪತ್ರಮುಖೇನ ಸಂಪಾದಕರಿಗೆ ಬರೆಯಬೇಕು.
೨) ಟಿವಿಗಳಲ್ಲಿ ಬರುವ ಅಸಮಂಜಸ ಕಾರ್ಯಕ್ರಮಗಳನ್ನು ವೀಕ್ಷಿಸುವದನ್ನು ನಿಲ್ಲಿಸಿ ಆ ಚಾನೆಲ್ಲಿನ T.R.P ಕಡಿಮೆ ಮಾಡಬೇಕು.
೩) ಮಾಧ್ಯಮಗಳ ಈ ತಪ್ಪನ್ನು ಸಾರ್ವಜನಿಕವಾಗಿ ಖಂಡಿಸಬೇಕು.
ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
....(ಮುಂದುವರೆಯುತ್ತದೆ)
 
;